ADVERTISEMENT

ಮುಂದಿನ ಅವಧಿಯಲ್ಲಿ ಪ್ರತಿ ಮನೆಗೂ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 5:43 IST
Last Updated 28 ಫೆಬ್ರುವರಿ 2023, 5:43 IST

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಮೂಲಕ ಈ ಭಾಗದ ಪ್ರತಿ ಮನೆಗೆ ಉದ್ಯೋಗ ಕಲ್ಪಿಸಿ, ಈ ತಾಲ್ಲೂಕನ್ನು ಮಾದರಿಯಾಗಿ ಮಾಡುವ ಪಣ ತೊಟ್ಟಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.

ಮಂಚೇನಹಳ್ಳಿ ತಾಲ್ಲೂಕಿನ ಮಿಣಕನಗುರ್ಕಿ ಗ್ರಾ. ಪಂ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಮಿಣಕನಗುರ್ಕಿ ಗ್ರಾ.ಪಂ ವ್ಯಾಪ್ತಿಯ 6 ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಮಾಡಲಾಗಿದ್ದು, ಒಟ್ಟು 212 ನಿವೇಶನಗಳನ್ನು ವಸತಿ ರಹಿತರಿಗೆ ನೀಡಲಾಗುವುದು ಎಂದರು.

ಮಂಚೇನಹಳ್ಳಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಮಾಡುವ ನಿಟ್ಟಿನಲ್ಲಿ ತಾಲ್ಲೂಕು ಕಚೇರಿ, ತಾಲ್ಲೂಕು ಆಸ್ಪತ್ರೆ, ತಾಯಿ ಮತ್ತು ಮಗುವಿನ ಆಸ್ಪತ್ರೆ
ಸೇರಿದಂತೆ ತಾಲ್ಲೂಕಿಗೆ ಅಗತ್ಯವಿರುವ ಎಲ್ಲ ಅಭಿವೃದ್ಧಿ ಮಾಡಿದ್ದೇನೆ. ಈ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿರುವುದಾಗಿ ಹೇಳಿದರು.

ADVERTISEMENT

ತಾವು ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿದ್ದಾಗ ಅತಿ ಹೆಚ್ಚು ಮತ ನೀಡಿ ಆಶೀರ್ವದಿಸಿದ ಮಿಣುಕಿನಗುರ್ಕಿ ಗ್ರಾ.ಪಂ ಬಗ್ಗೆ ತಮಗೆ ವಿಶೇಷ ಒಲವಿದ್ದು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಗ್ರಾ. ಪಂಗೆ ನೂತನ ಕಚೇರಿ ಕಟ್ಟಡದ ಅಗತ್ಯವಿದ್ದು, ಇದಕ್ಕಾಗಿ 5 ಗುಂಟೆ ಭೂಮಿ ಮಂಜೂರು ಮಾಡಿಸಲಾಗಿದೆ. ಈ ಜಾಗದಲ್ಲಿ ಮಾದರಿ ಗ್ರಾ. ಪಂ ಕಚೇರಿ ಕಟ್ಟಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ತಾವು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯಕ್ಕೆ ಒಟ್ಟು ಆರು ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲಾಗಿದ್ದು, ಇದರಲ್ಲಿ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜುಗಳು ಮಾರ್ಚ್ 17ರಂದು ಉದ್ಘಾಟನೆಯಾಗಲಿವೆ. ಉಳಿದಂತೆ ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಪ್ರಸ್ತುತ ಆಯವ್ಯಯದಲ್ಲಿ ವೈದ್ಯಕೀಯ ಕಾಲೇಜುಗಳು ಮಂಜೂರಾಗಿರುವುದಾಗಿ ಅವರು ಹೇಳಿದರು.

ಅಲ್ಲದೆ ಮಿಣಕನಗುರ್ಕಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ 212 ನಿವೇಶನಗಳನ್ನು ಉಚಿತವಾಗಿ ವಿತರಿಸುವ ಜೊತೆಗೆ 125 ಮನೆಗಳನ್ನು ಮಂಜೂರು ಮಾಡಲಾಗಿದೆ. ಆ ಮೂಲಕ ಸುಮಾರು 400 ಕುಟುಂಬಗಳಿಗೆ ವಸತಿ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗೋವಿಂದರಾಜು, ರಮೇಶ್, ಭರತ್ ರೆಡ್ಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಹನುಮೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.