ADVERTISEMENT

ದೇಶದ ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ದೊರೆಯಬೇಕು: ನ್ಯಾಯಾಧೀಶ ಪಿ.ಎಂ.ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 14:19 IST
Last Updated 2 ಸೆಪ್ಟೆಂಬರ್ 2024, 14:19 IST
ಚಿಂತಾಮಣಿಯಲ್ಲಿ ಸೋಮವಾರ ರಾಷ್ಟ್ರೀಯ ಪೌಷ್ಟಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು
ಚಿಂತಾಮಣಿಯಲ್ಲಿ ಸೋಮವಾರ ರಾಷ್ಟ್ರೀಯ ಪೌಷ್ಟಿಕ ದಿನಾಚರಣೆ ಕಾರ್ಯಕ್ರಮ ನಡೆಯಿತು   

ಚಿಂತಾಮಣಿ: ‘ದೇಶದ ಯಾವೊಬ್ಬ ಮಗು ಸಹ ಅಪೌಷ್ಟಿಕತೆಯಿಂದ ಬಾಳಲಾರದು. ಬೆಳೆಯುವ ಹಂತದಲ್ಲಿ ಉತ್ತಮ ಆಹಾರ ಸಿಗಬೇಕು’ ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಂ.ಪ್ರಕಾಶ್ ಹೇಳಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸೋಮವಾರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಪೌಷ್ಟಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಕ್ಕಳಿಗೆ ಸಮತೋಲನ ಆಹಾರ ನೀಡುವುದು ಮುಖ್ಯ. ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಅವರಿಗೆ ಯಾರ ರೀತಿಯ ಆಹಾರ ನೀಡಿದರೆ ಮಕ್ಕಳ ಬೆಳವಣಿಗೆಯಾಗುತ್ತದೆ ಎಂಬುದನ್ನು ಅಧಿಕಾರಿಗಳು ಗಮನಿಸಬೇಕು. ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಮಹತ್ವದ ಕೆಲಸವಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಮತೋಲನವಾದ ಪೌಷ್ಟಿಕ ಆಹಾರ ದೊರೆಯುವಂತೆ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವ ಮಂಜೇಶ್ ಪೌಷ್ಟಿಕ ಆಹಾರ ಕುರಿತು ಉಪನ್ಯಾಸ ನೀಡಿ, ‘ಸಮತೋಲನ ಮತ್ತು ಪೌಷ್ಟಿಕ ಆಹಾರಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡುವ ಅಗತ್ಯವಿಲ್ಲ. ನಮ್ಮ ಮನೆಗಳ ಸುತ್ತಮುತ್ತಲು, ತೋಟಗಳಲ್ಲಿ ದೊರೆಯುವ ತಾಜಾ ಸೊಪ್ಪು, ತರಕಾರಿ, ಹಣ್ಣು ಸೇವನೆ ಮಾಡಿದರೆ ಪೌಷ್ಟಿಕ ಆಹಾರವಾಗುತ್ತದೆ. ಜನರು ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯಂತೆ ಹತ್ತಿರದಲ್ಲೇ ಸಿಗುವ ಸೊಪ್ಪು, ಕಾಯಿಪಲ್ಯೆಗಳ ಬಗ್ಗೆ ಉದಾಸೀನತೆ ತೋರುತ್ತಾರೆ’ ಎಂದರು.

‘ಗ್ರಾಮೀಣ ಭಾಗದ ಜನರಿಗೆ ತಮ್ಮ ಸುತ್ತಮುತ್ತಲೂ ಪೌಷ್ಟಿಕ ಆಹಾರದ ಸಾಕಷ್ಟು ಪದಾರ್ಥಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಪ್ರತಿಯೊಬ್ಬರೂ ಸೊಪ್ಪು, ಹಸಿರು ತರಕಾರಿ, ಹಣ್ಣು ಹಂಪಲುಗಳ ಸೇವನೆ ಮಾಡಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಬಿ.ಶ್ರೀನಿವಾಸ್, ಉಪಾಧ್ಯಕ್ಷ ಜಿ.ಶಿವಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್.ಜಿ.ಮಹೇಶಬಾಬು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.