ಚಿಂತಾಮಣಿ: ಫೇಸ್ಬುಕ್ನಲ್ಲಿ ಪರಿಚಯವಾದ ಚಿಂತಾಮಣಿಯ ಯುವಕ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದು, ₹15 ಲಕ್ಷ ಪಡೆದು ವಂಚಿಸಿದ್ದಾನೆ ಎಂದು ಮಂಡ್ಯದ ವಿವಾಹಿತ ಮಹಿಳೆಯೊಬ್ಬರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ನಗರದ ಇಡ್ಲಿಪಾಳ್ಯದ ನಿವಾಸಿ ಸತೀಶ್ ಎಂಬ ಯುವಕನ ವಿರುದ್ಧ ಮಂಡ್ಯ ಮೂಲದ ಮಹಿಳೆ ದೂರು ನೀಡಿದ್ದಾಳೆ. ಪತಿಯಿಂದ ಪರಿತ್ಯಕ್ತೆಯಾಗಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಬಟ್ಟೆ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆಕೆಗೆ ಮೂರು ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಸತೀಶ ಎಂಬ ಯುವಕನ ಪರಿಚಯವಾಗಿತ್ತು.
‘ನನ್ನ ಸ್ಥಿತಿಯ ಬಗ್ಗೆ ಕನಿಕರ ತೋರಿಸಿ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ್ದ. ಚಿಂತಾಮಣಿಗೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದ. ಆ ನಂತರ ಹಲವು ಬಾರಿ ಮಂಡ್ಯದ ನಮ್ಮ ಮನೆಗೂ ಬಂದು ಅತ್ಯಾಚಾರ ನಡೆಸಿದ್ದಾನೆ. ನನಗೆ ಗೊತ್ತಿಲ್ಲದಂತೆ ನನ್ನ ನಗ್ನ ಚಿತ್ರಗಳನ್ನು ಸೆರೆ ಹಿಡಿದು, ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಬೆದರಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
‘ನನ್ನಿಂದ ಬಲವಂತವಾಗಿ ₹15 ಲಕ್ಷ ರೂಪಾಯಿ ಪಡೆದು ಕ್ರಮೇಣ ನನ್ನಿಂದ ದೂರವಾಗಲು ಯತ್ನಿಸಿದ. ಮದುವೆಯಾಗುವಂತೆ ಬಲವಂತ ಮಾಡಿದಾಗಲೆಲ್ಲ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಬೇಸತ್ತು ಎರಡು ವರ್ಷಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೆ. ಆತನೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ನಗರಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.