ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯಲ್ಲಿ ಗುರುವಾರ ಅನಾರೋಗ್ಯಪೀಡಿತ ಮಹಿಳೆ ರಸ್ತೆಬದಿಯಲ್ಲಿ ಮೃತಪಟ್ಟರು. ಕೊರೊನಾ ಭಯದಿಂದ ಜನರು ಹತ್ತಿರ ಸುಳಿಯದೆ ಜೆಸಿಬಿಯಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಿದ್ದಾರೆ.
ಚಂದ್ರಕಲಾ ಅವರು ಒಂದು ವಾರದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ನಿತ್ರಾಣರಾಗಿದ್ದ ಅವರು 12 ವರ್ಷದ ಮಗಳ ತೊಡೆಯ ಮೇಲೆ ತಲೆ ಇಟ್ಟು ಮಲಗಿ ಹಾಗೆಯೇ ಸಾವನ್ನಪ್ಪಿ ದ್ದಾರೆ. ತಾಯಿ ಎದ್ದೇಳದೆ ಇದ್ದರಿಂದ ಮಗಳು ಅಳುತ್ತಿದ್ದುದನ್ನು ಕಂಡವರು ಗ್ರಾಮಾಂತರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಚಂದ್ರಕಲಾ ಪತಿ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ನಂತರ ಗ್ರಾಮ ತೊರೆದು ಅವರು ಚಿಂತಾಮಣಿಯಲ್ಲಿ ವಾಸವಾಗಿದ್ದರು.
‘ಅಮ್ಮ ಮತ್ತು ನಾನು ಬಾಗೇಪಲ್ಲಿಗೆ ಕೆಲಸಕ್ಕಾಗಿ ಹೋಗಿದ್ದೆವು. ಅಲ್ಲಿ ಕೆಲಸ ಸಿಗದ ಕಾರಣ ವಾಪಸ್ ಕುರುಟಹಳ್ಳಿಗೆ ಬಂದೆವು. ಆ ವೇಳೆಗೆ ಅಮ್ಮ ನಿತ್ರಾಣ ಗೊಂಡರು. ರಾತ್ರಿಯಲ್ಲಾ ರಸ್ತೆಬದಿಯಲ್ಲಿಯೇ ಇದ್ದೆವು’ ಎಂದು ಪುತ್ರಿ ತಿಳಿಸಿದರು.
ಮೃತ ಮಹಿಳೆಗೆ ಹತ್ತು ವರ್ಷದ ಪುತ್ರ ಕೂಡ ಇದ್ದು, ಸಂಬಂಧಿಕರ ಮನೆಯಲ್ಲಿದ್ದಾನೆ. ಪುತ್ರಿಯನ್ನು ಈಗ ಆ ಸಂಬಂಧಿಕರೇ ಕರೆದೊಯ್ದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.