ADVERTISEMENT

ಚಿಕ್ಕಬಳ್ಳಾಪುರ: ಹೆಚ್ಚುತ್ತಿದೆ ಹೂವಿನ ಘಮ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಪುಷ್ಪ ಕೃಷಿ; ಹೊರ ರಾಜ್ಯಗಳಿಗೂ ರವಾನೆ

ಡಿ.ಎಂ.ಕುರ್ಕೆ ಪ್ರಶಾಂತ
Published 18 ಮೇ 2025, 0:30 IST
Last Updated 18 ಮೇ 2025, 0:30 IST
<div class="paragraphs"><p>ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರಪುರ ಗ್ರಾಮದ ಹೊರವಲಯದಲ್ಲಿ ಹೂ ಬಿಡಿಸುತ್ತಿರುವ ಮಹಿಳೆಯರು </p></div>

ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರಪುರ ಗ್ರಾಮದ ಹೊರವಲಯದಲ್ಲಿ ಹೂ ಬಿಡಿಸುತ್ತಿರುವ ಮಹಿಳೆಯರು

   

(ಸಂಗ್ರಹ ಚಿತ್ರ)

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೂ ಬೇಸಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಹೂ ಬೆಳೆಯುವ ಪ್ರದೇಶ ಹೆಚ್ಚಿದಂತೆ ಉತ್ಪಾದನೆಯೂ ಏರಿಕೆಯಾಗಿದೆ.

ADVERTISEMENT

ರಾಜ್ಯದಲ್ಲಿ ಅತಿ ಹೆಚ್ಚು ಹೂ ಬೇಸಾಯ ನಡೆಯುತ್ತಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಪ್ರಮುಖವಾಗಿದೆ. ಇಲ್ಲಿ ಬೆಳೆಯುವ ಹೂವು ರಾಜ್ಯದ ವಿವಿಧ ಭಾಗಗಳಿಗೆ ರವಾನೆ ಆಗುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ನವದೆಹಲಿಗೆ ‍ಪೂರೈಕೆ ಆಗುತ್ತಿದೆ. ಗ್ಲಾಡಿಯೊಲಸ್ ಹೂವಿಗೆ ನವದೆಹಲಿ ಮಾರುಕಟ್ಟೆ ಪ್ರಮುಖವಾಗಿದೆ. 

ಚಿಕ್ಕಬಳ್ಳಾಪುರ, ಮಂಚೇನಹಳ್ಳಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ಪುಷ್ಪ ಕೃಷಿ ಪ್ರಧಾನವಾಗಿದ್ದರೆ ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕಿನ ರೈತರ ಆರ್ಥಿಕ ಬದುಕಿಗೆ ಹೂ ಬೇಸಾಯ ಬಲ ನೀಡುತ್ತಿದೆ. 

2014–15ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,936 ಹೆಕ್ಟೇರ್‌ನಲ್ಲಿ ಹೂ ಬೇಸಾಯ ನಡೆಯುತ್ತಿತ್ತು. 2023–24ನೇ ಸಾಲಿಗೆ 8 ಸಾವಿರ ಹೆಕ್ಟೇರ್‌ನಲ್ಲಿ ‍ಪುಷ್ಪ ಕೃಷಿ ನಡೆಯುತ್ತಿದೆ. ಈ ಅಂಕಿ ಅಂಶಗಳೇ ಜಿಲ್ಲೆಯು ಹೂ ಬೇಸಾಯಕ್ಕೆ ಹೇಗೆ ಒಡ್ಡಿಕೊಂಡಿದೆ ಎನ್ನುವುದನ್ನು ಸಾರುತ್ತಿದೆ.

ಕನಕಾಂಬರ, ಸೇವಂತಿಗೆ, ಸುಗಂಧರಾಜ, ಚೆಂಡು, ಗ್ಲಾಡಿಯೊಲಸ್, ಗುಲಾಬಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಇವುಗಳ ಜೊತೆಗೆ ಚೈನಾ ಆಸ್ಕರ್, ಮಲ್ಲಿಗೆ, ಬರ್ಡ್ ಆಫ್ ಪ್ಯಾರಡೇಜ್, ಜೆರ್ಬೆರಾ ಮತ್ತಿತರ ಅಲಂಕಾರ ಹೂಗಳ ಬೇಸಾಯ ಸಹ ನಡೆದಿದೆ.

ಬರದ ನಾಡಿನ ಹಣೆಪಟ್ಟಿಯ ಜಿಲ್ಲೆಯಲ್ಲಿ ಹೂ ಬೇಸಾಯ ರೈತರ ಬದುಕಿಗೆ ಆಸರೆಯಾಗಿದೆ. ಕನಿಷ್ಠ ನಾಲ್ಕೈದು ಗುಂಟೆ ಜಮೀನಿನಿಂದ ಹಿಡಿದು ಎಕರೆಗಳ ಲೆಕ್ಕದಲ್ಲಿ ರೈತರು ಹೂ ಬೇಸಾಯದಲ್ಲಿ ತೊಡಗಿದ್ದಾರೆ.  

‘ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಗೆ ನಿತ್ಯ 40 ಟನ್‌ಗೂ ಅಧಿಕ ಹೂ ಆವಕವಾಗುತ್ತದೆ. ಇದಕ್ಕಿಂತಲೂ ದುಪ್ಪಟ್ಟು ಪ್ರಮಾಣದ ಹೊರ ರಾಜ್ಯಗಳಿಗೆ ನಿತ್ಯ ರವಾನೆ ಆಗುತ್ತದೆ’ ಎನ್ನುತ್ತಾರೆ
ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರ. 

ಉತ್ತಮ ಮಾರುಕಟ್ಟೆಯೇ ಕಾರಣ’

ಸ್ಥಳೀಯ ಹವಾಗುಣಕ್ಕೆ ಹೊಂದುವ ಬೇರೆ ಬೇರೆ ತಳಿಯ ಹೂವುಗಳನ್ನು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ರೈತರಿಗೆ ಮಾರುಕಟ್ಟೆ ಉತ್ತಮವಾಗಿರುವುದೇ ಹೂ ಬೇಸಾಯಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ.

ಬೆಂಗಳೂರು ಮಹಾನಗರ, ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಅಂತರ ರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಸಮೀಪವಿದೆ. ಹೈದರಾಬಾದ್‌ಗೆ ಹೂ ಕಳುಹಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇದೆ ಎಂದರು. ಕಡಿಮೆ ಅವಧಿಯಲ್ಲಿ ಮತ್ತು ಐದತ್ತು ಗುಂಟೆ ಜಾಗದಲ್ಲಿ ಹೂವಿನ ಬೇಸಾಯ ನಡೆಸಿ ಬದುಕು ಕಟ್ಟಿಕೊಳ್ಳುತ್ತಿರುವ ಕುಟುಂಬಗಳು ಇವೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.