ಚಿಂತಾಮಣಿ: ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಹಾರ ನಿರೀಕ್ಷಕ ಪ್ರಕಾಶ್ ಅವರನ್ನು ಕರ್ತವ್ಯಲೋಪ ಆರೋಪದ ಮೇಲೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಇಲಾಖೆಯ ಆಯುಕ್ತ ಹಾಗೂ ಶಿಸ್ತು ಪ್ರಾಧಿಕಾರದ ಅಧಿಕಾರಿ ಡಾ.ಶಮ್ಲಾ ಇಕ್ಬಾಲ್ ಆದೇಶಿಸಿದ್ದಾರೆ.
ಹಿನ್ನೆಲೆ: 2020ರ ನ.17ರಂದು ಪಡಿತರ ಅಕ್ಕಿಯನ್ನು ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಸಾರ್ವಜನಿಕರು ಮಾಲು ಸಮೇತ ಹಿಡಿದು ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ತಹಶೀಲ್ದಾರ್ ಕ್ಯಾಂಟರ್ನಲ್ಲಿದ್ದ ಅಕ್ಕಿಮೂಟೆಗಳನ್ನು ಪರಿಶೀಲಿಸಿ ಪೊಲೀಸ್ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲು ಸೂಚಿಸಿದ್ದರು. ಆಹಾರ ನಿರೀಕ್ಷಕ ಪ್ರಕಾಶ್ ಸುಮಾರು ಒಂದು ಗಂಟೆತಡವಾಗಿ ಬಂದು ತಹಶೀಲ್ದಾರ್ ಅವರನ್ನು ಕಾಯುವಂತೆಮಾಡಿದ್ದರು.
ಕ್ಯಾಂಟರ್ ಮತ್ತು ಗೋದಾಮಿನಲ್ಲಿ 100ಕ್ಕೂ ಹೆಚ್ಚು ಅಕ್ಕಿ ಮೂಟೆಗಳು ಕಂಡುಬಂದಿದ್ದವು. ಆದರೆ ಆಹಾರ ನಿರೀಕ್ಷಕರು 33 ಮೂಟೆಗಳು ಎಂದು ದೂರು ನೀಡಿರುವ ಬಗ್ಗೆ ಇಲಾಖೆಗೆ ಹಾಗೂ ಸಚಿವರಿಗೆ ವಾಟ್ಸ್ ಆ್ಯಪ್ ಮತ್ತು ಇಮೇಲ್ ಮುಖಾಂತರ ದೂರುಗಳನ್ನು ನೀಡಲಾಗಿತ್ತು. ತಹಶೀಲ್ದಾರ್ ಮತ್ತು ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರು ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದರು. ಪ್ರಕಾಶ್ ಅವರನ್ನು ಬೆಂಗಳೂರಿನ ಆಯುಕ್ತರ ಕಚೇರಿ ಆಡಳಿತ ಶಾಖೆಗೆ ನಿಯೋಜಿಸಿದ್ದರೂ ಕರ್ತವ್ಯಕ್ಕೆ ಹಾಜರಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.