ಚೇಳೂರು: ತಾಲ್ಲೂಕು ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಗಣೇಶ ಹಬ್ಬದ ಸಡಗರ ನಾಲ್ಕು ದಿನಗಳು ಸೇರಿದಂತೆ ಮಂಗಳವಾರವು ಮುಂದುವರೆಯಿತು. ಸೋಮವಾರ ಗಣೇಶ ಹಬ್ಬದ ಸಲುವಾಗಿ ಕಡುಬು ರುಚಿ ಸವಿದಿದ್ದ ಜನ ಮಂಗಳವಾರ ಮಾಂಸದೂಟ ರುಚಿ ಸವಿದರು.
ಶ್ರಾವಣ ಶನಿವಾರ ಆರಂಭದಿಂದ ಗಣೇಶ ಹಬ್ಬದವರೆಗೂ ಬಹುತೇಕ ಜನರು ಮಾಂಸ ತಿನ್ನುವುದಿಲ್ಲ. ಹಾಗಾಗಿ ಒಂದು ತಿಂಗಳಿನಿಂದ ಮಾಂಸದ ರುಚಿ ಕಾಣದಿದ್ದ ಜನರು ಮಂಗಳವಾರ ಮಾಂಸದೂಟ ಉಂಡು ಸಂಭ್ರಮಿಸಿದರು.
ಬೆಳಕು ಹರಿಯುವ ಮುನ್ನವೇ ಮಾಂಸದ ಅಂಗಡಿಗಳ ಮುಂದೆ ಜನಜಾತ್ರೆ ಸೇರಿತ್ತು. ಪಟ್ಟಣದ ಎಂಜಿ ಸರ್ಕಲ್, ಚಿಂತಾಮಣಿ ರಸ್ತೆಯ ಬದಿಗಳಲ್ಲಿ, ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ, ಬಾಗೇಪಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಕೋಳಿ ಮತ್ತು ಮಾಂಸದ ಹೆಚ್ಚು ಅಂಗಡಿಗಳಿವೆ. ಆರ್ಎಂಸಿ ಮುಂಭಾಗದಲ್ಲಿ ಹಂದಿ ಮಾಂಸದ ಅಂಗಡಿಗಳಲ್ಲಿ ಮಾರಾಟವೂ ಜೋರಾಗಿ ನಡೆಯಿತು. ಮೀನು ಮತ್ತು ನಾಟಿ ಕೋಳಿ ವ್ಯಾಪಾರವೂ ಜೋರಾಗಿ ಸಾಗಿತ್ತು.
ಕೆಲವು ಅಂಗಡಿಗಳಲ್ಲಿ ಸಾಲಾಗಿ ನಿಲ್ಲಿಸಿ ಮುಂಗಡ ಹಣ ಪಡೆದು ಮಾಂಸ ವಿತರಣೆ ಮಾಡುತ್ತಿದ್ದರು. ಕುರಿ ಮೇಕೆ ಒಂದು ಕೆ.ಜಿ.ಗೆ ₹700 ಹಾಗೂ ಕೋಳಿ ಮಾಂಸ ₹200ರಿಂದ ₹250 ರವರೆಗೆ ಮಾರಾಟವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.