ಗೌರಿಬಿದನೂರು: ಸ್ವಚ್ಛತೆಯೇ ಸೇವೆ ಅಭಿಯಾನದ ಅಡಿ ನಗರದಲ್ಲಿ ಹೆಚ್ಚು ಕಸ ಸಂಗ್ರಹವಾಗುವ ಬ್ಲಾಕ್ ಸ್ಪಾಟ್ಗಳನ್ನು ಅಂದಗೊಳಿಸುವ ಕಾರ್ಯಕ್ರಮವನ್ನು ನಗರಸಭೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಯಿತು.
ನಗರಸಭೆ ಪೌರಾಯುಕ್ತ ಕೆ.ಜಿ. ರಮೇಶ್ ಮಾತನಾಡಿ, ‘ನಗರದಲ್ಲಿ 28 ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದೆ. ಇಲ್ಲಿ ಹೆಚ್ಚು ಪ್ರಮಾಣದ ಕಸ ಸಂಗ್ರಹವಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಸ್ವಚ್ಛತೆ ಮಾಡಿ ಅಲಂಕಾರ ಮಾಡಿ, ಹೂವಿನ ಗಿಡಗಳನ್ನು ನೆಟ್ಟು, ಕಸ ಹಾಕಬಾರದು ಎಂಬ ನಾಮಫಲಕವನ್ನು ಅಳವಡಿಸಲಾಗಿದೆ. ಈಗಾಗಲೇ ನಗರದ ಐದಾರು ಕಡೆ ಇದೆ ಕಸ ಹಾಕುವ ಸ್ಥಳಗಳನ್ನು ಅಂದಗೊಳಿಸಲಾಗಿದೆ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಈ ಅಭಿಯಾನದಿಂದ ಇಲ್ಲಿ ಕಸ ಹಾಕುವ ಜನರಲ್ಲೂ ಕಸ ಹಾಕಬಾರದು ಎಂಬ ಜಾಗೃತಿ ಮೂಡಿದೆ. ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ನಗರಸಭೆ ವಾಹನಗಳಿಗೆ ನೀಡಲು ಪೌರ ಕಾರ್ಮಿಕರು ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರವು ಸಹ ಅತ್ಯಗತ್ಯ ಎಂದು ತಿಳಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ, ಉಪಾಧ್ಯಕ್ಷ ಫರೀದ್, ಪರಿಸರ ಅಭಿಯಂತರ ಶಿವಶಂಕರ್, ಆರೋಗ್ಯ ನಿರೀಕ್ಷಕ ಸಣ್ಣ ಮೀರ್, ನಗರಸಭೆ ಸದಸ್ಯ ಸಪ್ತಗಿರಿ, ಲೋಕೇಶ್, ನಗರಸಭೆ ಸಿಬ್ಬಂದಿ ಹಾಗೂ ವಾರ್ಡ್ ನಿವಾಸಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.