ADVERTISEMENT

ಹಾಲಗಾನಹಳ್ಳಿ ಅಂಚೆ ಕಚೇರಿಗೆ ಮುತ್ತಿಗೆ

ಹಣದೊಂದಿಗೆ ಪರಾರಿಯಾದ ಮಹಿಳಾ ಅಂಚೆಪೇದೆ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:13 IST
Last Updated 27 ಫೆಬ್ರುವರಿ 2026, 7:13 IST
ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಪೇದೆಯಿಂದ ವಂಚನೆಗೊಳಗಾದ ಖಾತೆದಾರರು ಗುರುವಾರ ನಗರದ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಪೇದೆಯಿಂದ ವಂಚನೆಗೊಳಗಾದ ಖಾತೆದಾರರು ಗುರುವಾರ ನಗರದ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ಗೌರಿಬಿದನೂರು: ಎರಡು ತಿಂಗಳ ಗ್ರಾಹಕರ ಸುಮಾರು ₹2 ಕೋಟಿಯೊಂದಿಗೆ ಪರಾರಿಯಾದ ಮಹಿಳಾ ಅಂಚೆಪೇದೆ (ಪೋಸ್ಟ್‌ವುಮನ್) ರಮ್ಯಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಅಂಚೆ ಖಾತೆದಾರರು ಪ್ರತಿಭಟನೆ ನಡೆಸಿದರು.

ಜೊತೆಗೆ ಅಂಚೆ ಖಾತೆದಾರರ ಹಣವನ್ನು ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. 

ಈ ವೇಳೆ ಪ್ರತಿಕ್ರಿಯಿಸಿದ ಪ್ರತಿಭಟನಕಾರರು, ‘ಹಾಲಗಾನಹಳ್ಳಿ ಅಂಚೆ ಕಚೇರಿ ಮಹಿಳಾ ಅಂಚೆಪೇದೆ ಸುಮಾರು ಎರಡು ತಿಂಗಳ ಹಿಂದೆ ಗ್ರಾಹಕರನ್ನು ವಂಚಿಸಿ ಹಣ ಪಡೆದು ಪರಾರಿಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಈವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹಣ ಕಳೆದುಕೊಂಡ ನಮಗೆ ಅಂಚೆ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ. ಆದರೆ, ವಂಚನೆ ಎಸಗಿದವರಿಗೆ ಭದ್ರತೆ ಒದಗಿಸಲಾಗಿದೆ. ಹಣ ಕಳೆದುಕೊಂಡು ಸುಮಾರು ತಿಂಗಳು ಕಳೆದರೂ, ನಯಾಪೈಸೆ ವಾಪಸ್ ಬಂದಿಲ್ಲ. ಈ ಕೃತ್ಯದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಇದೆ’ ಎಂದು ದೂರಿದರು. 

ADVERTISEMENT

ಹಿರಿಯ ನಾಗರಿಕರ ಆಕ್ರಂದನವು ಎಂಥವರ ಮನಸ್ಸನ್ನೂ ಕಲಕುವಂತಿತ್ತು. 

ಹಣ ಕಳೆದುಕೊಂಡ ಸಂತ್ರಸ್ತೆ ನಾಗಮಣಿ ಮಾತನಾಡಿ, ‘ನಾನು ನನ್ನ ಅಂಚೆ ಖಾತೆಯಲ್ಲಿ ₹12 ಲಕ್ಷ ಕಟ್ಟಿದ್ದೆ. ಆದರೆ, ಖಾತೆಯಲ್ಲಿ ₹1 ಲಕ್ಷ ಮಾತ್ರ ತೋರಿಸುತ್ತಿದೆ. ರಮ್ಯಾ ಎಂಬ ಅಂಚೆಪೇದೆ ನನ್ನ ₹11 ಲಕ್ಷವನ್ನು ನುಂಗಿ ನೀರು ಕುಡಿದಿದ್ದಾಳೆ. ಪೊಲೀಸ್ ವಿಚಾರಣೆ ವೇಳೆ, ನಮ್ಮ ಹಣ ವಾಪಸ್ ಕೊಡುವುದಾಗಿ ರಮ್ಯಾ ಹೇಳಿದ್ದಳು. ಆದರೆ, ಇದೀಗ ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಂಡು ಬರುತ್ತೇನೆ ಎನ್ನುತ್ತಿದ್ದಾರೆ’ ಎಂದು ಅಲವತ್ತುಕೊಂಡರು. 

ಕಳೆದ ಎರಡು ತಿಂಗಳಿನಿಂದ ಸರಿಯಾಗಿ ಊಟ, ನಿದ್ದೆಯಿಲ್ಲ, ಕಾಯಿಲೆಗಳಿಂದ ಬಳಲುತ್ತಿದ್ದೇನೆ. ಕಾಲಿಗೆ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಕೈಯಲ್ಲಿ ಹಣವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ. ಅಂಚೆ ಕಚೇರಿ ಅಧಿಕಾರಿಗಳಿಗೆ ಕೇಳೋಣ ಎಂದರೆ ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ. ಯಾವ ರಾಜಕಾರಣಿ, ಯಾವ ಅಧಿಕಾರಿಯು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿಕೊಂಡರು. 

ಗ್ರಾಮಸ್ಥ ರಂಜಿತ್ ಮಾತನಾಡಿ, ಈ ಪ್ರಕರಣ ಬೆಳಕಿಗೆ ಬಂದು ಎರಡು ತಿಂಗಳು ಕಳೆದರೂ ಯಾವೊಬ್ಬ ಅಧಿಕಾರಿಯು ಸರಿಯಾದ ಮಾಹಿತಿ ನೀಡುತ್ತಿಲ್ಲ. ಎರಡು ಬಾರಿ ಜಿಲ್ಲಾಧಿಕಾರಿ ಮತ್ತು ಎಸ್. ಪಿ ಅವರ ಬಳಿ ಹೋಗಿ ಬಂದಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿನ ವೃದ್ಧರು ಕೂಲಿ ಮಾಡಿ, ಬೇವಿನ ಕಾಯಿ, ಹುಣಸೆಕಾಯಿ, ಹೊಂಗೆ ಕಾಯಿಗಳನ್ನು ಆಯ್ದು, ಮಾರಿ ಬಂದ ಹಣವನ್ನು ಅಂಚೆ ಕಚೇರಿಯಲ್ಲಿ ಇಟ್ಟಿದ್ದರು. ಜೀವನ ಪರ್ಯಂತ ದುಡಿದ ಹಣ ಸಂಧ್ಯಾಕಾಲಕ್ಕೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಮಕ್ಕಳ ಮದುವೆಗೆ ಸಹಾಯವಾಗುತ್ತದೆ ಎಂದುಕೊಂಡಿದ್ದರು. ಆದರೆ, ಹಣ ವಾಪಸ್ ಕೊಡಿಸಲು ಯಾರೂ ಮುಂದಾಗುತ್ತಿಲ್ಲ. ಈ ವಂಚನೆ ಎಸಗಿದವರೆಗೆ ಪ್ರಭಾವಿಗಳು ರಕ್ಷಣೆ ನೀಡುತ್ತಿದ್ದಾರೆ. ಈ ಹಣದ ವಿಚಾರಕ್ಕೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ದಾಖಲೆ ಇದ್ದರೆ ಹಣ ವಾಪಸ್ ‘

ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ಕಳೆದುಕೊಂಡವರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಖಾತೆದಾರರ 1757 ಖಾತೆಗಳ ಪಾಸ್‌ಬುಕ್‌ಗಳನ್ನು ತನಿಖೆ ಮಾಡಲಾಗುತ್ತಿದೆ. 57 ಪಾಸ್‌ಬುಕ್‌ಗಳಲ್ಲಿ ನ್ಯೂನತೆ ಕಂಡುಬಂದಿದೆ. 57ಪಾಸ್‌ಬುಕ್‌ಗಳಿಂದ ಅಂದಾಜು ₹37 ಲಕ್ಷ ಸಿಕ್ಕಿದೆ. ಮತ್ತಷ್ಟು ಪಾಸ್‌ಬುಕ್‌ಗಳು ಸಿಗಬೇಕಿದೆ. ಸಿಕ್ಕಿದ ನಂತರ ಒಟ್ಟು ಎಷ್ಟು ಹಣ ಎಂಬುದು ಖಚಿತವಾಗುತ್ತದೆ. ಶೇ 40ರಷ್ಟು ಖಾತೆಗಳನ್ನು ಪರಿಶೀಲನೆ ಮಾಡಲಾಗಿದೆ. 600 ಖಾತೆಗಳು ಪೊಲೀಸರ ವಶದಲ್ಲಿವೆ. ಕೆಲವು ಖಾತೆದಾರರು ನಮಗೆ ಇನ್ನೂ ಸಿಕ್ಕಿಲ್ಲ. ಅವು ಹಾಗೆ ಉಳಿದಿವೆ. ಖಾತೆದಾರರ ಬಳಿ ಅಂಚೆ ಕಚೇರಿ ನೀಡಿರುವ ಅಧಿಕೃತ ದಾಖಲೆಗಳು ಸರಿ ಇದ್ದರೆ ಅಂತಹವರಿಗೆ ನಿಯಮಾವಳಿಗಳ ಪ್ರಕಾರ ಹಣ ವಾಪಸ್ ನೀಡಬಹುದು’ ಎಂದು ಕೋಲಾರ ಅಂಚೆ ವಿಭಾಗದ ಡೆಪ್ಯೂಟಿ ಸೂಪರ್ ಇಂಡೆಂಟ್ ದಯಾನಂದ್ ಹೇಳಿದರು.

ತನಿಖೆ ಚುರುಕು

ಹಾಲಗಾನಹಳ್ಳಿಅಂಚೆ ಕಚೇರಿಯಲ್ಲಿ 1200ಕ್ಕೂ ಅಧಿಕ ಖಾತೆದಾರರು ಲಕ್ಷಾಂತರ ರೂಪಾಯಿ ಆರ್‌ಡಿ ಎಫ್‌ಡಿ ಸೇವಿಂಗ್ಸ್‌ನಲ್ಲಿ ಹಣ ಜಮೆ ಮಾಡಿದ್ದರು. ಅಂಚೆ ಪೇದೆ ರಮ್ಯಾ ವಂಚನೆ ಮಾಡಿದ್ದಾರೆ ಎಂದು ಖಾತೆದಾರರು ಪೊಲೀಸರಿಗೆ ದೂರು ನೀಡಿದ್ದರು.  ದೂರು ದಾಖಲಿಸಿಕೊಂಡ ಅಂಚೆ ಪೊಲೀಸರು ಅಂಚೆಪೇದೆ ರಮ್ಯಾ ಮತ್ತು ಖಾತೆದಾರರ ಸಮ್ಮುಖದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಂಚೆ ಕಚೇರಿ ಆರು ಮಂದಿ ತಂಡವು ಹಾಲಗಾನಹಳ್ಳಿ ಗ್ರಾಮಕ್ಕೆ ತೆರಳಿ ದಾಖಲೆಗಳ ಸಹಿತ ವಿಚಾರಣೆ ನಡೆಸಿ ಹಣ ಕಳೆದುಕೊಂಡವರ ಪಟ್ಟಿ ಸಿದ್ಧಪಡಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.