ADVERTISEMENT

ವೃದ್ಧೆಯ ಚಿನ್ನ, ನಗದು ದೋಚಿದ ಅಪರಿಚಿತ

ಪಿಂಚಣಿ ನೆಪದಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:34 IST
Last Updated 3 ಮಾರ್ಚ್ 2021, 2:34 IST

ಶಿಡ್ಲಘಟ್ಟ: ನಗರದ ದೇಶದಪೇಟೆಯಲ್ಲಿ ಪಿಂಚಣಿ ಮಾಡಿಸಿಕೊಡುವ ಆಮಿಷವೊಡ್ಡಿ ವೃದ್ಧೆಯೊಬ್ಬರ ಬಳಿಯಿದ್ದ ಸುಮಾರು 80 ಗ್ರಾಂ ಚಿನ್ನ ಮತ್ತು ₹25 ಸಾವಿರ ದೋಚಿದ್ದಾರೆ.

ದೇಶದಪೇಟೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಗೌರಮ್ಮ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಸರ್ಕಾರದಿಂದ ಪ್ರತಿತಿಂಗಳು ಹಣ ಬರುವ ಪಿಂಚಣಿಯನ್ನು ಉಚಿತವಾಗಿ ಮಾಡಿಸಿಕೊಡುತ್ತೇನೆಂದು ಹೇಳಿದ್ದಾನೆ. ಒಡವೆಗಳನ್ನೆಲ್ಲಾ ಬಿಚ್ಚಿಡಿ, ಸರ್ಕಾರಿ ಆಸ್ಪತ್ರೆಗೆ ಹೋಗಿ ಪ್ರಮಾಣಪತ್ರ ಪಡೆಯಬೇಕು ಎಂದು ಹೇಳಿ ಕರೆದೊಯ್ದಿದ್ದಾನೆ. ಅವರ ಜೊತೆಗೆ ಪಕ್ಕದ ಮನೆ ಮಹಿಳೆಯೂ ಜೊತೆಯಲ್ಲಿ ಹೋಗಿದ್ದಾರೆ. ಆಸ್ಪತ್ರೆಯ ಬಳಿ ಹೋದಾಗ ರೇಷನ್ ಕಾರ್ಡ್ ಮತ್ತಿತರ ದಾಖಲೆಗಳು ಬೇಕೆಂದು ಹೇಳಿದ್ದಾನೆ. ವೃದ್ಧೆ ಗೌರಮ್ಮ ಪಕ್ಕದ ಮನೆ ಮಹಿಳೆಗೆ ಬೀಗದ ಕೈ ಕೊಟ್ಟು, ತಾನಿಲ್ಲೇ ಇರುವೆ ಹೋಗಿ ತನ್ನಿ ಎಂದಿದ್ದಾರೆ. ಮಹಿಳೆಯೊಂದಿಗೆ ಆ ಅಪರಿಚಿತ ವ್ಯಕ್ತಿ ಅವರ ಮನೆಗೆ ಹೋದಾಗ, ಮಹಿಳೆಯನ್ನು ದಾಖಲಾತಿಗಳನ್ನು ತರಲು ಹೇಳಿದ್ದಾನೆ. ಅವರ ಗಮನ ಬೇರೆಡೆ ಸೆಳೆದು ಮನೆಯಲ್ಲಿದ್ದ ಒಡವೆಗಳು ಮತ್ತು ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಗೌರಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

ಮರುಕಳಿಸಿದ ಘಟನೆ: ಇದೇ ರೀತಿಯಾಗಿ ಕೆಲ ದಿನಗಳ ಹಿಂದೆ ಶಿಡ್ಲಘಟ್ಟದ ಮುತ್ತೂರು ಬೀದಿಯಲ್ಲಿರುವ ವೃದ್ಧೆಯೊಬ್ಬರನ್ನು ಮೋಸಗೊಳಿಸಿ ಹಣ ಮತ್ತು ಒಡವೆಯನ್ನು ದೋಚಲಾಗಿತ್ತು.

ADVERTISEMENT

ಒಬ್ಬಂಟಿ ವೃದ್ಧರನ್ನು ಮೋಸಗೊಳಿಸಿ ಹಣ ದೋಚುವ ಜಾಲವನ್ನು ಪೊಲೀಸರು ಭೇದಿಸಬೇಕು. ಕಳ್ಳರನ್ನು ಬಂಧಿಸಬೇಕು. ಹಲವೆಡೆ ರಾತ್ರಿ ವೇಳೆ ಯುವಕರು ವೀಲಿಂಗ್ ಮಾಡುತ್ತಾ ಕಿರುಚಾಡುವುದಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.