ADVERTISEMENT

ಜರಬಂಡಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ: 71,172 ಜನರಿಗೆ ಸ್ಥಳದಲ್ಲಿಯೇ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:25 IST
Last Updated 27 ನವೆಂಬರ್ 2022, 2:25 IST
ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವ್ಯ  ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ ಹಾಗೂ ಡಾ.ಕೆ.ಸುಧಾಕರ್ ರಾಗಿ ಬೀಸಿದರು 
ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ನಡೆದ ಗ್ರಾಮ ವಾಸ್ತವ್ಯ  ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ ಹಾಗೂ ಡಾ.ಕೆ.ಸುಧಾಕರ್ ರಾಗಿ ಬೀಸಿದರು    

ಮಂಚೇನಹಳ್ಳಿ (ಚಿಕ್ಕಬಳ್ಳಾಪುರ ಜಿ):‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದ ಅಂಗವಾಗಿ ನಾವು ನಡೆಸುತ್ತಿರುವ ಗ್ರಾಮ ವಾಸ್ತವ್ಯದಲ್ಲಿ ಇಲ್ಲಿಯವರೆಗೆರಾಜ್ಯದಲ್ಲಿ 71,172 ಜನರಿಗೆ ಸ್ಥಳದಲ್ಲಿಯೇ ಸರ್ಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗಿದೆಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿಯಲ್ಲಿ ಶನಿವಾರಗ್ರಾಮ ವಾಸ್ತವ್ಯ ಹಾಗೂ ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರು ಕಚೇರಿಯಲ್ಲಿ ಕುಳಿತರೆ ಉಪಯೋಗ ಏನು? ಅವರು ಸೇವೆ ಮಾಡಿಸಿಕೊಳ್ಳಲು ಇರುವುದಲ್ಲ. ಅಧಿಕಾರಿಗಳು ಜನರ ಸೇವೆಗಾಗಿ ಇರುವುದು. ಅಧಿಕಾರಿಗಳು ಯಾವುದೇ ಒಂದು ಗ್ರಾಮಕ್ಕೆ ಹೋಗಿ 24 ಗಂಟೆಗಳ ಕಾಲ ಅಲ್ಲಿಯೇ ಇದ್ದು ಅಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಬಹಳಷ್ಟು ಅಧಿಕಾರಿಗಳು ಕಚೇರಿ ಮತ್ತು ಮನೆಗಳನ್ನು ಬಿಟ್ಟರೆ ಹೊರಗೆ ಬರುತ್ತಿರಲಿಲ್ಲ. ಈಗ ಅವರು ಹಳ್ಳಿಗಳಲ್ಲಿ ಮಲಗುವಂತೆ ಮಾಡಿದ್ದೇವೆ ಎಂದರು.

ADVERTISEMENT

ಬ್ರಿಟಿಷರ ಕಾಲದ ಕಂದಾಯ ಇಲಾಖೆಯ ಕಾನೂನುಗಳನ್ನು ಬದಲಾವಣೆ ಮಾಡಬೇಕಾಗಿದೆ. ಕಾನೂನುಗಳು ಜನಸ್ನೇಹಿಯಾಗಿ ಇರಬೇಕು. ಬಡವರು ಮನೆ ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ 7 ದಿನಗಳಲ್ಲಿ ಭೂ ಪರಿವರ್ತನೆ ಮಾಡಲು ಕಾನೂನು ಜಾರಿಗೊಳಿಸಲಾಗುವುದು ಎಂದರು.

ಸಚಿವ ಡಾ.ಕೆ.ಸುಧಾಕರ್, ಎಂ.ಟಿ.ಬಿ ನಾಗರಾಜ್‌ ಭಾಗವಹಿಸಿದ್ದರು.

ಖಾತೆ; 7 ದಿನಗಳಿಗೆ ಇಳಿಕೆ
ಯಾವುದೇ ಒಬ್ಬ ರೈತರು ಜಮೀನು ಖರೀದಿಸಿದರೆ ಅದು ನೋಂದಣಿಯಾದ 34 ದಿನಗಳಲ್ಲಿ ಅವರ ಹೆಸರಿಗೆ ಖಾತೆ ಆಗುತ್ತಿದೆ. ಆದರೆ ಅದನ್ನು 7 ದಿನಗಳಿಗೆ ಇಳಿಸಿ ಎಂದು ಬಹಳಷ್ಟು ಗ್ರಾಮಸಭೆಗಳಲ್ಲಿ ಜನರು ಆಗ್ರಹಿಸುತ್ತಿದ್ದಾರೆ. ಈ ದಿಕ್ಕಿನಲ್ಲಿ ನಾವು ಸಹ ಆಲೋಚಿಸಿದ್ದು ಬದಲಾವಣೆ ಮಾಡುತ್ತೇವೆ ಎಂದು ಆರ್.ಅಶೋಕ ತಿಳಿಸಿದರು.

ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಆಯಾ ಹಳ್ಳಿಗಳಲ್ಲಿಯೇ ವಾಸಿಸಬೇಕು ಎನ್ನುವ ಸುತ್ತೋಲೆಯನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು ಎಂದು ಹೇಳಿದರು.

‘ಸೋತ ನೋವಿದೆ’
ಕಾಂಗ್ರೆಸ್ ತೊರೆದಿದ್ದಕ್ಕೆ ನೋವಿದೆ ಎನ್ನುವುದನ್ನು ವೇದಿಕೆಯಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್ ಪರೋಕ್ಷವಾಗಿ ಪ್ರಸ್ತಾಪಿಸಿದರು.

ಯಾವ ಶಾಸಕರು ಅಭಿವೃದ್ಧಿ ಪರವಾಗಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಜನರು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಆದರೆ ಚುನಾವಣೆ ಸಮಯದಲ್ಲಿ ಅದನ್ನು ಮರೆತು ಬಿಡುತ್ತೀರಾ ಎಂದು ಎಂ.ಟಿ.ಬಿ.ನಾಗರಾಜ್ ಹೇಳಿದರು.

‘ನನ್ನದೂ ಒಂದು ತಪ್ಪಿದೆ. ನಾವಿಬ್ಬರೂ ಕಾಂಗ್ರೆಸ್ ಬಿಟ್ಟೆವು. ಈ ಪುಣ್ಯಾತ್ಮನನ್ನು (ಡಾ.ಕೆ.ಸುಧಾಕರ್) ಗೆಲ್ಲಿಸಿದರು. ನನ್ನ ಸೋಲಿಸಿದರು. ಆ ನೋವು ನನಗೆ ಇದೆ. ಸೋತಿದ್ದರಿಂದ ನನಗೆ ಏನೂ ಆಗಿಲ್ಲ. ಆದರೆ ಕೆಲಸ ಮಾಡಲು ಅವಕಾಶ ‌ತಪ್ಪಿತಲ್ಲ ಎನಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.