ADVERTISEMENT

ಯೋಗಕ್ಷೇಮ ವಿಚಾರಿಸದ ಮೊಮ್ಮಗಳು: ಅಜ್ಜಿಗೆ ಜಮೀನು ವಾಪಸ್ ಕೊಡಿಸಿದ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 3:52 IST
Last Updated 3 ಸೆಪ್ಟೆಂಬರ್ 2022, 3:52 IST
ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಅವರು ಮುನಿವೆಂಕಟಮ್ಮ ಅವರ ಮನೆಗೆ ತೆರಳಿ ಆದೇಶ ಪತ್ರ ನೀಡಿದರು
ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಅವರು ಮುನಿವೆಂಕಟಮ್ಮ ಅವರ ಮನೆಗೆ ತೆರಳಿ ಆದೇಶ ಪತ್ರ ನೀಡಿದರು   

ಚಿಕ್ಕಬಳ್ಳಾಪುರ: ಅಜ್ಜಿಯ ಯೋಗಕ್ಷೇಮ ನೋಡಿಕೊಳ್ಳದ ಕಾರಣ ಮೊಮ್ಮಗಳ ಹೆಸರಿನಲ್ಲಿನಲ್ಲಿದ್ದ ಜಮೀನನ್ನು ಇಲ್ಲಿನ ಉಪವಿಭಾಗಾಧಿಕಾರಿ ನ್ಯಾಯಾಲಯ ಅಜ್ಜಿಗೆ ವಾಪಸ್ ಕೊಡಿಸಿದೆ.

ತಾಲ್ಲೂಕಿನ ಕೇತೇನಹಳ್ಳಿ ಗ್ರಾಮದ ಮುನಿವೆಂಕಟಮ್ಮ ಇಟ್ಟಪ್ಪನಹಳ್ಳಿ ಗ್ರಾಮದಲ್ಲಿ 2.14 ಎಕರೆ ಜಮೀನು ಹೊಂದಿದ್ದರು. ಅನಕ್ಷರಸ್ಥೆಯಾದ ಅವರಿಂದ ಮೊಮ್ಮಗಳು ಶೈಲಜಾ ದಾನಪತ್ರದ ಮೂಲಕ ಈ ಜಮೀನನ್ನು ಪಡೆದಿದ್ದರು.ತಮ್ಮ ಹೆಸರಿಗೆ ಖಾತೆಯನ್ನೂ ಮಾಡಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಮೊಮ್ಮಗಳು, ಮುನಿವೆಂಕಟಮ್ಮ ಅವರ ಯೋಗಕ್ಷೇಮ ನೋಡಿಕೊಳ್ಳದೆ ನಿರ್ಲಕ್ಷಿಸಿದ್ದರು.

ಇದರಿಂದ ನೊಂದ ಮುನಿವೆಂಕಟಮ್ಮ ದಾನಪತ್ರ ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್ ಅವರು, ‘ಹಿರಿಯ ನಾಗರಿಕರ ಪಾಲನೆ, ಪೋಷಣೆ ಕಾಯ್ದೆ’ ಅಡಿ ದಾನಪತ್ರ ರದ್ದುಗೊಳಿಸಿದ್ದಾರೆ.

ADVERTISEMENT

ಮುನಿವೆಂಕಟಮ್ಮ ಅವರ ಜೀವನ ನಿರ್ವಹಣೆಗಾಗಿ ಶೈಲಜಾಮಾಸಿಕ ₹8 ಸಾವಿರ ನೀಡಬೇಕು ಎಂದು ಆದೇಶಿಸಿದ್ದಾರೆ.ಒಂದು ವೇಳೆ ಈ ಆದೇಶವನ್ನು ಪಾಲಿಸದಿದ್ದಲ್ಲಿ ದಂಡ ವಿಧಿಸುವ ಅಥವಾ ಬಂಧಿಸುವ ಎಚ್ಚರಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಚಿಂತಾಮಣಿಯಲ್ಲಿ ಸಹ ಇಂತಹದ್ದೇ ಪ್ರಕರಣದಲ್ಲಿಸಂತೋಷ್ ಕುಮಾರ್ ದಾನಪತ್ರ ರದ್ದುಗೊಳಿಸಿದ್ದರು. ಪೋಷಕರ ಜೀವನ ನಿರ್ವಹಣೆಗೆ ಮೂವರು ಪುತ್ರಿಯರು ಮಾಸಿಕ ತಲಾ ₹7 ಸಾವಿರ ನೀಡುವಂತೆ ಆದೇಶಿಸಿದ್ದರು.ಈ ಎರಡೂ ಪ್ರಕರಣಗಳಲ್ಲಿ ಖುದ್ದು ಉಪವಿಭಾಗಾಧಿಕಾರಿ ವೃದ್ಧರ ಮನೆಗೆ ತೆರಳಿ ಆದೇಶಪತ್ರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.