
ಗೌರಿಬಿದನೂರು: ನಗರದ ಆಚಾರ್ಯ ಕೃಷಿ ಮೈದಾನದಲ್ಲಿ ಭಾನುವಾರ ಹಿಂದೂ ಸಮಾವೇಶ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಮಾಜೋತ್ಸವ ಮತ್ತು ಶೋಭಾಯಾತ್ರೆ ನಡೆಯಿತು.
ಈ ವೇಳೆ ಹಿಂದೂ ಪ್ರಾಂತ ಸಾಮರಸ್ಯ ಸಹಪ್ರಮುಖ್ ರಾಜೇಶ್ ಮಾತನಾಡಿ, ಇತಿಹಾಸದಲ್ಲಿ ಅನೇಕ ಸಂಸ್ಕೃತಿಗಳು ನಾಶವಾಗಿವೆ. ಆದರೆ, ಹಿಂದೂ ಸಂಸ್ಕೃತಿ ಎಂದಿಗೂ ನಾಶವಾಗುವುದಿಲ್ಲ ಎಂದರು.
ಇತಿಹಾಸವನ್ನು ಒಮ್ಮೆ ಗಮನಿಸಿದರೆ ಗ್ರೀಕ್ ಮತ್ತು ರೋಮ್ ನಂತಹ ಅನೇಕ ಸಂಸ್ಕೃತಿಗಳು ದಾಳಿಕೋರರಿಂದ ನಾಶವಾಗಿದೆ. ಹಿಂದೂ ಸಂಸ್ಕೃತಿ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಆದರೆ, ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಾಗಿಲ್ಲ ಎಂದರು.
ಅಸ್ಪೃಶ್ಯತೆಯನ್ನು ಆಚರಣೆ ಮಾಡುವವರು ಹಿಂದೂಗಳೇ ಅಲ್ಲ, ಇಂತಹ ಕಂದಾಚಾರ ಸರಿ ಮಾಡಿಕೊಂಡು ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.
ಆನಂದ ಆಶ್ರಮದ ನರೋತ್ತಾನಂದ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಅದನ್ನು ಉಳಿಸುವ ಪ್ರಯತ್ನ ಮತ್ತು ಜವಾಬ್ದಾರಿ ಇಂದಿನ ಯುವಕರ ಮೇಲಿದೆ. 12 ಮತ್ತು 16ನೇ ಶತಮಾನದಲ್ಲಿ ಶರಣರು ಎಲ್ಲಾ ಮತಗಳು ಸೇರಿ ಹಿಂದೂ ಧರ್ಮವಾಗಿದೆಂದು ಹೇಳಿದ್ದಾರೆ. ನಾವು ಎಚ್ಚೆತ್ತುಕೊಳ್ಳುವುದಕ್ಕೆ ಹಿಂದೂ ಸಮಾಜೋತ್ಸವವನ್ನು ಎಲ್ಲಾ ಕಡೆಗಳಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ನಗರದ ಪ್ರಮುಖ ಬೀದಿಗಳಲ್ಲಿ ಹಿಂದೂಪರ ಸಂಘಟನೆಯವರು ಬೈಕ್ ರ್ಯಾಲಿ ನಡೆಸಿದರು. ರಾಂಬಾಬು, ಸಂಜೀವ್ ರೆಡ್ಡಿ, ಶಿವಾರೆಡ್ಡಿ, ಸ್ವಾಗತ್ ,ರಾಜೇಶ್, ಸುಮ ಸಂಜಯ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.