ಗೌರಿಬಿದನೂರು: ತಾಲ್ಲೂಕಿನ ಬೆಳತ್ತೂರು ಗ್ರಾಮದ ಸರ್ವೆ ನಂಬರ್ 72 ಮತ್ತು ಕದಿರನಹಳ್ಳಿ ಗ್ರಾಮದ ಸರ್ವೆ ನಂಬರ್ 98ರಲ್ಲಿ ಗೋಮಾಳ ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಪ್ರಜಾಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆರ್. ಎನ್. ರಾಜು ಆರೋಪಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದರಿಂದ ಎತ್ತಿನಹೊಳೆ ಕಾಮಗಾರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸುತ್ತಿಲ್ಲ ಎಂದರು.
ತಾಲ್ಲೂಕಿಗೆ ಎತ್ತಿನಹೊಳೆ ಯೋಜನೆಯ ಮುಖ್ಯ ಪೈಪ್ಲೈನ್ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ಬೆಳತ್ತೂರಿನಿಂದ ಮಣಿವಾಲದವರೆಗೂ ಕಾಮಗಾರಿ ಪೂರ್ಣವಾಗಿದೆ. ಈ ಸ್ಥಳಗಳಿಗೆ ಹೊಂದಿಕೊಂಡಂತೆ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಎತ್ತಿನ ಹೊಳೆ ಅಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.
ಹಾಲಿ ಮತ್ತು ಮಾಜಿ ಶಾಸಕರ ಗಮನಕ್ಕೆ ಈ ವಿಚಾರ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಈ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಪ್ರಕೃತಿ ನಾಶವಾಗುತ್ತಿದೆ. ತಾಲ್ಲೂಕಿನ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ ಎಂದರು.
ಕದಿರದೇವರಹಳ್ಳಿ ಗ್ರಾಮದ ಸರ್ವೆ ನಂ 98ರ ಜಮೀನಿನಲ್ಲಿ ಎತ್ತಿನಹೊಳೆ ಪೈಪ್ ಲೈನ್ ಅಳವಡಿಸಿ, ಏರ್ವಾಲ್ ಚೇಂಬರ್ ನಿರ್ಮಿಸಲಾಗಿದೆ. ಈ ಪೈಪ್ ಲೈನ್ ಚೇಂಬರ್ ಮೇಲೆ ಭಾರಿ ವಾಹನಗಳು ಸಂಚರಿಸುತ್ತಿವೆ. ಈ ಪೈಪ್ಲೈನ್ಗೆ ಧಕ್ಕೆಯಾದರೆ ಎತ್ತಿನಹೊಳೆ ಯೋಜನೆ ಮೇಲೆ ಪರಿಣಾಮ ಬೀರುತ್ತದೆ ಎಂದರು.
ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಂ.ಆರ್ ಲಕ್ಷ್ಮಿ ನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕಡೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಅರ್ಕುಂದ ಬಳಿ ನೂರು ಅಡಿ ಆಳ ಮತ್ತು ನೂರು ಅಡಿ ಅಗಲವಿರುವ ಗುಂಡಿಯನ್ನು ಯಾವುದೇ ಅಧಿಕಾರಿ ಈವರೆಗೆ ಮುಚ್ಚಲು ಸಾಧ್ಯವಾಗಿಲ್ಲ. ಮಂಚೇನಹಳ್ಳಿ ಬಳಿ ಸಹ ಇದೇ ವಿಚಾರಕ್ಕೆ ಶೂಟ್ ಔಟ್ ಸಹ ನಡೆದಿತ್ತು ಎಂದರು.
ಈ ಬಗ್ಗೆ ಯಾವುದೇ ಅಧಿಕಾರಿಗಳು ಗಮನವಹಿಸುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಹೋರಾಟ ನಡೆಸಲಾಗುವುದು. ಸರ್ಕಾರ ಜಾನುವಾರುಗಳಿಗೆ ಮೀಸಲಿಟ್ಟ ಜಾಗವನ್ನು ಹಣದ ಆಸೆಗಾಗಿ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ, ಜನ ಸ್ಪಂದನ ಕಾರ್ಯಕ್ರಮದಲ್ಲಿ ಈ ಬಗ್ಗೆ ಧ್ವನಿ ಎತ್ತಿದಾಗ ಅಕ್ರಮವಾಗಿ ಗಣಿಗಾರಿಕೆ ನಡೆಸುವುದನ್ನು ನಿಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.