ADVERTISEMENT

ಚಿಂತಾಮಣಿ: ಜೈನ್ ವಿ.ವಿ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಂತಾಮಣಿಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 5:04 IST
Last Updated 17 ಫೆಬ್ರುವರಿ 2023, 5:04 IST
ಚಿಂತಾಮಣಿಯಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು
ಚಿಂತಾಮಣಿಯಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು   

ಚಿಂತಾಮಣಿ: ‘ದಲಿತ ಮಹಿಳೆ ಮತ್ತು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಉದ್ದೇಶ ಪೂರ್ವಕವಾಗಿ ವ್ಯಂಗ್ಯ ಮಾಡಿದ ಜೈನ್ ವಿವಿಯ ಅನುಮತಿಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರ ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

‘ಬೆಂಗಳೂರಿನ ಜಯನಗರದ 9ನೇ ಬ್ಲಾಕ್ ನಲ್ಲಿರುವ ಜೈನ್ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕರ ವೃಂದ ಆಯೋಜನೆ ಮಾಡಿದ ನಾಟಕದಲ್ಲಿ ದಲಿತ ಮಹಿಳೆ ಜಾತಿ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಜ್ಞಾನದ ಸಂಕೇತ ಎಂದು ಪರಿಗಣಿಸಿದೆ. ಇಂತಹ ಘನತೆಯುಳ್ಳ ವ್ಯಕ್ತಿ ಬಗ್ಗೆ ಜೈನ್ ವಿವಿ ವಿದ್ಯಾರ್ಥಿಗಳು ನಾಟಕದಲ್ಲಿ ಅಪಮಾನಿಸಿದ್ದಾರೆ. ಇದಕ್ಕೆ ಆಡಳಿತ ಮಂಡಳಿ, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ನಕ್ಕಿರುವುದು ಶೋಚನೀಯ. ಇದು ಪೂರ್ವ ನಿಯೋಜಿತ ಕೃತ್ಯ’ ಎಂದು ಮುಖಂಡ ಕವಾಲಿ ವೆಂಕಟರವಣಪ್ಪ ತಿಳಿಸಿದರು.

‘ಸಂಘ ಪರಿವಾರದ ಒಬ್ಬ ಚಡ್ಡಿ ಪುಡಾರಿ ಗಾಂಧಿಯನ್ನು ಗೂಡ್ಸೆ ಗುಂಡಿಕ್ಕಿ ಕೊಂದಂತೆ, ನಾನೂ ಅಂಬೇಡ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದೆ ಎಂದಿರುವವನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗದಿರಲು ಕಾರಣವೇನು ಎಂದು ಪ್ರಶ್ನಿಸಿದರು.

ADVERTISEMENT

ಜೈನ್ ವಿಶ್ವ ವಿದ್ಯಾಲಯದ ಅನುಮತಿ ಹಿಂಪಡೆಯುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಜಾಥಾ ಪ್ರಮುಖ ಬೀದಿಗಳಲ್ಲಿ ಸಾಗಿತು.

ಜೈನ್ ವಿಶ್ವ ವಿದ್ಯಾಲಯ ಹಾಗೂ ಸರ್ಕಾರದ ವಿರುದ್ಧ ದಿಕ್ಕಾರ ಕೂಗಲಾಯಿತು.

ದಲಿತ ಮುಖಂಡರಾದ ಕವಾಲಿ ವೆಂಕಟರವಣಪ್ಪ, ಜಿ. ನಾರಾಯಣಸ್ವಾಮಿ, ದೇವಮ್ಮ, ಲಕ್ಷ್ಮಿನಾರಾಯಣ, ರಾಮಕೃಷ್ಣ, ಎಂ. ಆನಂದ, ಶ್ರೀರಂಗಪ್ಪ ಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.