
ಬಾಗೇಪಲ್ಲಿ: ಕಮ್ಯೂನಿಟಿ ಹುದ್ದೆಗಳಿಗೆ ಅರ್ಹರನ್ನು ನೇಮಿಸಬೇಕು. ಅರ್ಹರಿಗೆ ನಿವೇಶನ, ಮನೆ ಹಂಚಿಕೆ ಮಾಡಬೇಕು. ಕುಡಿಯುವ ನೀರು ಸರಬರಾಜು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ಮುಖಂಡರು ಮಂಗಳವಾರ ಪುರಸಭೆ ಮುಂದೆ ಪ್ರತಿಭಟನೆ ಮಾಡಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಬಾಬಾಜಾನ್ ಮಾತನಾಡಿ, ಪುರಸಭೆಯಲ್ಲಿ ಕಮ್ಯುನಿಟಿ ಮೊಬಿಲೈಸರ್ನ 5 ಹುದ್ದೆಗಳನ್ನು ತಕ್ಷಣ ರದ್ದು ಮಾಡಬೇಕು. ಕಾನೂನಿನ ಅಡಿಯಲ್ಲಿ ಅರ್ಹರಿಗೆ ಅವಕಾಶ ಕಲ್ಪಿಸಬೇಕು. ₹18 ಸಾವಿರ ವೇತನದ 5 ಹುದ್ದೆಗೆ ಕೇವಲ 6 ಅರ್ಜಿ ಬಂದಿರುವುದು ಹಾಸ್ಯಾಸ್ಪದ. ಕಾನೂನಿನ ಅಡಿಯಲ್ಲಿ 5 ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ 5 ವರ್ಷಗಳಿಂದ ಅರ್ಹ ಫಲಾನುಭವಿಗೆ ನಿವೇಶನ, ಮನೆ ಹಂಚಿಕೆ ಮಾಡಿಲ್ಲ. ಅರ್ಹರ ಪಟ್ಟಿ ಸಿದ್ಧ ಆದರೂ ನಿವೇಶನ ಹಂಚಿಕೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಳೆ ಕೆನರಾ ಬ್ಯಾಂಕ್ ಮುಂದೆ ಮತ್ತು ಗೂಳೂರು ರಸ್ತೆ ಪಕ್ಕದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಗಳನ್ನು 15 ವರ್ಷಗಳಿಂದ ಬಾಡಿಗೆಗೆ ನೀಡಿಲ್ಲ. ಇದರಿಂದ ಪುರಸಭೆ ಆದಾಯಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗಲು ಅಧಿಕಾರಿಗಳೇ ಕಾರಣ. ಕೂಡಲೇ ಮಳಿಗೆಗಳನ್ನು ಹರಾಜು ಮಾಡಿ ಎಂದರು.
ಪಟ್ಟಣದ ನೇತಾಜಿ ವೃತ್ತದ ಮತ್ತು ಡಿಸಿಸಿ ಬ್ಯಾಂಕ್ ಮುಂದೆ ತರಕಾರಿ ವ್ಯಾಪಾರಸ್ಥರಿಗೆ ಮತ್ತು ಹೂವು, ಹಣ್ಣು ಮಾರಾಟಗಾರರಿಗೆ ಮಳಿಗೆ ನಿರ್ಮಿಸಿ 5 ವರ್ಷ ಕಳೆದಿದೆ. ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿರುವುದರಿಂದ ವ್ಯಾಪಾರಸ್ಥರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಆಗಿಲ್ಲ ಎಂದರು.
4ನೇ ವಾರ್ಡ್ನಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಬೇಕು. ಪಟ್ಟಣದಿಂದ ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ ಹೋಗುವ ದಾರಿಯ ರಸ್ತೆಯನ್ನು ಸರಿಪಡಿಸಿ ಸಿ.ಸಿ ರಸ್ತೆ ಮಾಡಿಸಬೇಕು ಎಂದು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಕಂದಾಯ ಅಧಿಕಾರಿ ಅಥಾವುಲ್ಲಾ ಆಗಮಿಸಿ ಬೇಡಿಕೆಗಳ ಪಟ್ಟಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕರವೇ ಮುಖಂಡ ಆರ್.ರವೀಂದ್ರ, ಸೂರ್ಯನಾರಾಯಣರೆಡ್ಡಿ, ತಟ್ಟಹಳ್ಳಿ ಗಂಗರೆಡ್ಡಿ, ಶಿವಕುಮಾರ್, ಹರೀಶ್, ಸಮೀವುಲ್ಲಾ, ಜಿ.ವಿ.ವೆಂಕಟಶಿವಪ್ಪ, ನಾಗಿರೆಡ್ಡಿ, ರಫೀಕ್, ಸಲೀಂ, ಗಂಗಾಧರ, ಇದ್ದರೀಸ್ ವುಲ್ಲಾ, ಇಂದ್ರ, ಸುಹೇಲ್, ಮಂಜುನಾಥ್, ಗಣೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.