ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ಬಳಗ ಹಮ್ಮಿಕೊಂಡಿದ್ದ ಆನ್ಲೈನ್ ಕವಿಗೋಷ್ಠಿಯಲ್ಲಿ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.
ಬಳಗದ ಅಧ್ಯಕ್ಷ ನಂಜಪ್ಪರೆಡ್ಡಿ ಮಾತನಾಡಿ, ಕೊರೊನಾ ಸೋಂಕಿನ ಪರಿಣಾಮ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಲಾ– ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಮೂಹ ಸಮುದಾಯಗಳ ನಡುವೆ ಕಾರ್ಯಕ್ರಮ ಹಮ್ಮಿಕೊಂಡರೆ ಕೊರೊನಾ ಹರಡುವ ಭೀತಿಯಿದೆ. ಹೀಗಾಗಿ ಆನ್ಲೈನ್ ಮೂಲಕ ಕನ್ನಡ ಕಾರ್ಯಕ್ರಮಗಳನ್ನು ಮುನ್ನಡೆಸಲಾಗುತ್ತಿದೆ ಎಂದರು.
ಕನ್ನಡ ಕಾರ್ಯಕ್ರಮ ಹಮ್ಮಿಕೊಂಡು ಭಾಷೆಯ ಬೆಳವಣಿಗೆಗೆ ಸಹಕಾರ ನೀಡುವುದು ಹಾಗೂ ಅವಕಾಶ ವಂಚಿತ ಉದಯೋನ್ಮುಖ ಕವಿಗಳಿಗೆ ವೇದಿಕೆ ಒದಗಿಸುವುದು ಕವಿಗೋಷ್ಠಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಆನ್ಲೈನ್ ಕಾರ್ಯಕ್ರಮಗಳಿಗೂ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕಾರ್ಯಕ್ರಮಗಳಲ್ಲಿ ಹಲವರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದರು.
ಕವಿಗೋಷ್ಠಿಯಲ್ಲಿ ಪುರುಷೋತ್ತಮ್, ರಾಜೇಶ್ವರಿ ನಾರಾಯಣ್, ಶಿ.ಮ. ಮಂಜುನಾಥ್, ಎಂ. ಸುರೇಶ್, ಎನ್. ಮುನಿಕೃಷ್ಣಪ್ಪ, ಎಚ್.ಎಸ್. ಅಶೋಕ್, ಸ್ಮಿತವಾಣಿ ಸೀತಮ್ಮ, ಕೆ.ಎನ್. ಅಕ್ರಂಪಾಷಾ, ಸಿ.ಜಿ. ವೆಂಕಟೇಶ್ವರ, ಡಾ.ಕೆ. ಸೋಮಶೇಖರ್, ಶಶಿಕುಮಾರ್, ಜಿ.ಎಂ. ವೆಂಕಟೇಶ್ ಉತ್ಕೃಷ್ಟ, ಮೌಲ್ಯಾಧಾರಿತ ಹಾಗೂ ನೀತಿ ಬೋಧಕ ಸ್ವರಚಿತ ಕವನಗಳ ವಾಚನ ಮಾಡಿದರು. ಮೈಲಾಪುರ ಲೋಕೇಶ್ ಮತ್ತು ಟಿ.ಎಂ. ಈಶ್ವರಸಿಂಗ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಕಾರ ನೀಡಿದರು. ಶ್ರೀನಿವಾಸರೆಡ್ಡಿ, ಸಿ.ಎನ್. ಕೃಷ್ಣಪ್ಪ, ಸುಧಾಮಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.