
ಗುಡಿಬಂಡೆ: ಸರ್ಕಾರಗಳು ಅನುಸರಿಸುತ್ತಿರುವ ರೈತ ವಿರೋಧಿ ನೀತಿಗಳನ್ನು ಹಾಗೂ ಜಿಲ್ಲೆಯ ರೈತರ ಸಮಸ್ಯೆಗಳನ್ನು ಸಮಗ್ರವಾಗಿ ಚರ್ಚಿಸಲು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಕೆಪಿಆರ್ಎಸ್ ಮುಖಂಡ ಜಯರಾಮರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದ ಭಾಗವಾಗಿ ತಾಲ್ಲೂಕಿನಾದ್ಯಂತ ಪ್ರಚಾರ ಮತ್ತು ಕರಪತ್ರ ಹಂಚುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ರೈತರ ಅನೇಕ ಸಮಸ್ಯೆಗಳು ಇವೆ. ಆ ಸಮಸ್ಯೆಗಳನ್ನು ಚರ್ಚೆ ಮಾಡಿ ಅವುಗಳ ಪರಿಹಾರಕ್ಕಾಗಿ ಸಮ್ಮೇಳನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಭಾಗದ ಕೃಷಿಗಾಗಿ ಕೃಷ್ಣಾ ನದಿ ನೀರನ್ನು ಹರಿಸಬೇಕಾಗಿದೆ. ಕೆಪಿಆರ್ಎಸ್ನ 19ನೇ ಜಿಲ್ಲಾ ಸಮ್ಮೇಳನ ಬಾಗೇಪಲ್ಲಿಯಲ್ಲಿ ಫೆ. 25-26ರಂದು ನಡೆಯಲಿದೆ ಎಂದರು.
ಎಂ.ಎ ಆದಿನಾರಾಯಣ ಮಾತನಾಡಿ, ರೈತರಿಗೆ ಅನುಕೂಲವಾಗಿದ್ದ ಮನರೇಗಾವನ್ನು ಕೇಂದ್ರ ಬಿಜೆಪಿ ಸರ್ಕಾರವು ಅದರ ಸ್ವರೂಪವನ್ನೇ ಬದಲಿಸಿದೆ. ರೈತರ ಅಭಿವೃದ್ಧಿಗೆ ಹಿನ್ನಡೆಯಾಗುವಂತೆ ಆಗುತ್ತಿದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಉಪ್ಪಾರಹಳ್ಳಿ ಶ್ರೀನಿವಾಸ, ಡಿ.ಆರ್ ದೇವರಾಜು, ಖಜಾಂಚಿ ನರೇಗಾ ಸೀನಪ್ಪ, ಚನ್ನರಾಯಪ್ಪ, ಆದಿನಾರಾಯಣ ಸ್ವಾಮಿ, ರಮಣ, ಪುರುಷೋತ್ತಮ್, ಲಕ್ಷ್ಮಿನಾರಾಯಣ, ರಾಮು, ರಾಮಾಂಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.