ADVERTISEMENT

ಲಕ್ಷ್ಮೀನರಸಿಂಹಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 5:32 IST
Last Updated 20 ಫೆಬ್ರುವರಿ 2021, 5:32 IST
ಶಿಡ್ಲಘಟ್ಟದ ನಲ್ಲಿಮರದಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಹೋಮ, ಪೂಜೆ ನಡೆಯಿತು
ಶಿಡ್ಲಘಟ್ಟದ ನಲ್ಲಿಮರದಹಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಹೋಮ, ಪೂಜೆ ನಡೆಯಿತು   

ಶಿಡ್ಲಘಟ್ಟ: ನಗರದ ಹೊರವಲಯದ ನಲ್ಲಿಮರದಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವನ್ನು ವಿನೂತನವಾಗಿ ನಿರ್ಮಿಸಿದ್ದು, ಮೂರು ದಿನಗಳಿಂದ ನೂತನ ದೇವಾಲಯದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಸ್ಥಿರಬಿಂಬ, ಶಿವಲಿಂಗ, ನಾಗರಾಜ, ಧ್ವಜಸ್ತಂಭ, ವಿಮಾನಗೋಪುರ ಕಲಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯವನ್ನು ಲಕ್ಷ್ಮೀ ನರಸಿಂಹಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು ಒಗ್ಗೂಡಿ ಹಳೆಯ ವಿಗ್ರಹವನ್ನು ಇದ್ದ ಸ್ಥಳದಲ್ಲಿಯೇ ಉಳಿಸಿಕೊಂಡು ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ.

ಶಿವಾರಪಟ್ಟಣದ ಶಿಲ್ಪಿಗಳು ಕೆತ್ತಿರುವ ಆರು ಅದಿ ಎತ್ತರದ ಲಕ್ಷ್ಮೀ ನರಸಿಂಹಸ್ವಾಮಿ ವಿಗ್ರಹ ಮತ್ತು 22 ಅಡಿ ಎತ್ತರದ ಧ್ವಜಸ್ತಂಭ ದೇವಾಲಯದ ಮುಕುಟ ಪ್ರಾಯವಾಗಿದೆ. ದೇವಾಲಯದ ಮೇಲೆ ದಶಾವತಾರದ ಶಿಲ್ಪಗಳು, ಗೋಪುರದ ಬಳಿ ಆಂಜನೆಯ, ಗರುಡ ಮತ್ತು ಲಕ್ಷ್ಮೀನರಸಿಂಹಸ್ವಾಮಿ, ದೇವಸ್ಥಾನದ ಒಳಗೆ ಜಯ ವಿಜಯರ ಮೂರ್ತಿ, ದ್ವಾರದಲ್ಲಿನ ಸಿಂಹಗಳು, ಕಂಬಗಳ ಮೇಲೆ ಮಂಗಳ ವಾದ್ಯಗಳನ್ನು ನುಡಿಸುವವರ ಶಿಲ್ಪಗಳಿಗೆ ಬಣ್ಣಗಳನ್ನು ಬಳಿಯುವ ಮೂಲಕ ಆಕರ್ಷಕಗೊಳಿಸಲಾಗಿದೆ. ಪುರಾತನ ಅತ್ತಿ ಮರವನ್ನು ಸಂರಕ್ಷಿಸಿದ್ದಾರೆ.

ADVERTISEMENT

ಕಲ್ಲಿನ ಮುಖ್ಯದ್ವಾರದ ಚೌಕಟ್ಟು, ಗರ್ಭಗುಡಿ, ಧ್ವಜಸ್ತಂಭವನ್ನು ಕಾರ್ಕಳದ ಶಿಲ್ಪಿಗಳು ಕೆತ್ತಿದ್ದರೆ, ಗೋಪುರದ ಶಿಲ್ಪಗಳನ್ನು ಸಿಮೆಂಟಿನಲ್ಲಿ ನಾಗಪಟ್ನಂ ಶಿಲ್ಪಿಗಳು ರೂಪಿಸಿರುವರು. ದಕ್ಷಿಣ ಕನ್ನಡ ಶೈಲಿಯ ದೇವಾಲಯದಂತೆ ಗರ್ಭಗುಡಿಗೆ ಒಂಬತ್ತು ಮೆಟ್ಟಿಲು ಹತ್ತಿ ಹೋಗುವಂತೆ ಕಟ್ಟಿಸಲಾಗಿದೆ. ವಿವಿಧ ಹೋಮ, ಪೂಜೆಗಳನ್ನು ನಡೆಸಿ ಅನ್ನಸಂತರ್ಪಣೆಯನ್ನು ಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.