ADVERTISEMENT

ಮುಖ್ಯಮಂತ್ರಿ ನೀಡಿದ ಭರವಸೆ ಈಡೇರಿಸಲಿ

ಪತ್ರಿಕಾಗೋಷ್ಠಿಯಲ್ಲಿ ಬಲಿಜ ಜಾಗೃತಿ ಸಮಿತಿ ರಾಜ್ಯ ಘಟಕದ ಕಾರ್ಯದರ್ಶಿ ಎನ್.ಮಂಜುನಾಥ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 14:00 IST
Last Updated 3 ಜನವರಿ 2020, 14:00 IST

ಚಿಕ್ಕಬಳ್ಳಾಪುರ: ‘ಬಲಿಜ ಸಮುದಾಯಕ್ಕೆ ಸದ್ಯ ಪ್ರವರ್ಗ 2 (ಎ) ಅಡಿ ಶಿಕ್ಷಣಕ್ಕೆ ಸಿಗುತ್ತಿರುವ ಮೀಸಲಾತಿಯನ್ನು ಉದ್ಯೋಗಕ್ಕೂ ವಿಸ್ತರಿಸುವ ಮೂಲಕ ಸಮುದಾಯದ ಸರ್ವತೋಮಖ ಅಭಿವೃದ್ಧಿಗೆ ಸಹಕರಿಸಬೇಕಾದ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ನೀಡಿರುವ ಭರವಸೆಯಂತೆ ಬಲಿಜರಿಗೆ ಉದ್ಯೋಗದಲ್ಲೂ ಮೀಸಲಾತಿ ಕಲ್ಪಿಸಬೇಕು’ ಎಂದು ಬಲಿಜ ಜಾಗೃತಿ ಸಮಿತಿ ರಾಜ್ಯ ಘಟಕದ ಕಾರ್ಯದರ್ಶಿ ಎನ್.ಮಂಜುನಾಥ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲಿಜ ಸಮುದಾಯಕ್ಕೆ ಸೇರಿದ ಸಾವಿತ್ರಿಬಾಯಿ ಫುಲೆ ಅವರು ಅನಾದಿಕಾಲದಲ್ಲಿಯೇ ದಲಿತರು, ಹಿಂದುಳಿದ ವರ್ಗಗಳ ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿರುವುದು ಶ್ಲಾಘನೀಯ. ರಾಜ್ಯ ಸರ್ಕಾರ ಅಂತಹ ಧೀಮಂತ ಮಹಿಳೆಯ ಜಯಂತಿಯನ್ನು ಜನವರಿ 3 ರಂದು ಆಚರಿಸುವ ತೀರ್ಮಾನ ತೆಗೆದುಕೊಂಡಿರುವುದು ಅಭಿನಂದನಾರ್ಹ’ ಎಂದು ಹೇಳಿದರು.

‘ಬಲಿ ಚಕ್ರವರ್ತಿ, ಶ್ರೀಕೃಷ್ಣದೇವಾರಾಯ, ಯೋಗಿ ನಾರೇಯಣ ಯತೀಂದ್ರ, ಜ್ಯೋತಿಬಾಫುಲೆ ಸೇರಿದಂತೆ ಬಲಿಜ ಸಮುದಾಯದ ಅನೇಕ ಮಹನೀಯರು ದೇಶ ಕಟ್ಟಲು ಮತ್ತು ಎಲ್ಲ ಸಮುದಾಯದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮಡುಪಾಗಿಟ್ಟಿದ್ದರು. ಇಂತಹ ತ್ಯಾಗ ಗುಣ ಹೊಂದಿರುವ ಸಮುದಾಯದ ಬಡವರು ಇಂದಿಗೂ ಶೋಷಣೆ ಅನುಭವಿಸುತ್ತಿರುವುದು ನೋವಿನ ಸಂಗತಿ’ ಎಂದರು.

ADVERTISEMENT

ಬಲಿಜ ಜಾಗೃತಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ, ಉಪಾಧ್ಯಕ್ಷ ಬಿ.ವಿ.ಚಂದ್ರಶೇಖರ್, ನಿರ್ದೇಶಕರಾದ ಪ್ರಭಾವತಿ ಹರಿನಾಥ್, ರಾಮಚಂದ್ರಪ್ಪ, ಟಿ.ಕೆ.ಶಿವಕುಮಾರ್, ಸುಧಾಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.