ADVERTISEMENT

ಚರ್ಮಗಂಟು ಚಿಕಿತ್ಸೆಗಿಲ್ಲ ಸಿಬ್ಬಂದಿ: 40 ಜಾನುವಾರಗಳಿಗೆ ರೋಗ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 3:13 IST
Last Updated 17 ಅಕ್ಟೋಬರ್ 2022, 3:13 IST
ಚಿಂತಾಮಣಿಯ ಮುತ್ತುಕದಹಳ್ಳಿಯಲ್ಲಿ ಜಾನುವಾರಿಗೆ ಲಸಿಕೆ ನೀಡುತ್ತಿರುವುದು
ಚಿಂತಾಮಣಿಯ ಮುತ್ತುಕದಹಳ್ಳಿಯಲ್ಲಿ ಜಾನುವಾರಿಗೆ ಲಸಿಕೆ ನೀಡುತ್ತಿರುವುದು   

ಚಿಂತಾಮಣಿ: ತಾಲ್ಲೂಕಿನ 20 ಗ್ರಾಮಗಳಲ್ಲಿ 40 ಜಾನುವಾರು ಚರ್ಮಗಂಟು ರೋಗದಿಂದ ನರಳುತ್ತಿವೆ. ದಿನದಿಂದ ದಿನಕ್ಕೆ ರೋಗ ಹೆಚ್ಚಾಗುತ್ತಿರುವುದು ಹೈನುಗಾರರಲ್ಲಿ ಆತಂಕ ಮೂಡಿಸಿದೆ. ಆದರೆ ರೋಗಕ್ಕೆ ಚಿಕಿತ್ಸೆ ನೀಡಲು ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿಯೇ ಇಲ್ಲ !

ತಾಲ್ಲೂಕಿನಲ್ಲಿ 4 ಉಪ ಕೇಂದ್ರಗಳು ಸೇರಿ ಒಟ್ಟು 28 ಪಶುವೈದ್ಯಕಿಯ ಆಸ್ಪತ್ರೆಗಳಿವೆ. ನಾಲ್ಕು ಕೇಂದ್ರಗಳಲ್ಲಿ ವೈದ್ಯರಿಲ್ಲ. ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ.

ಅರೆವೈದ್ಯಕೀಯ (ಪ್ಯಾರಾಮೆಡಿಕಲ್) ಸಿಬ್ಬಂದಿ 28 ಹುದ್ದೆಗಳಲ್ಲಿ 13 ಮಂದಿ ಮಾತ್ರ ಕರ್ತವ್ಯದಲ್ಲಿದ್ದು, ಉಳಿದ 15 ಹುದ್ದೆಗಳು ಖಾಲಿ ಇವೆ. ಡಿ ದರ್ಜೆಯ 43 ಹುದ್ದೆಗಳಲ್ಲಿ 17 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. 26 ಹುದ್ದೆಗಳು ಖಾಲಿ ಇವೆ. ವೈದ್ಯರೇ ಬಂದು ಆಸ್ಪತ್ರೆಯ ಬಾಗಿಲು ತೆರೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ADVERTISEMENT

ಪಶು ಸಂಗೋಪನಾ ಮತ್ತು ಪಶುವೈದ್ಯ ಸೇವೆಗಳ ಇಲಾಖೆ ಮತ್ತು ಕೆ.ಎಂ.ಎಫ್ ಸಂಯುಕ್ತವಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. ತಾಲ್ಲೂಕಿನ ಪಣಸಚೌಡನಹಳ್ಳಿಯಲ್ಲಿ 4 ಮತ್ತು ನಾಯಿಂದ್ರಹಳ್ಳಿ ಗ್ರಾಮದಲ್ಲಿ 5 ಪ್ರಕರಣಗಳುಕಾಣಿಸಿಕೊಂಡಿವೆ. ಉಳಿದ ಗ್ರಾಮಗಳಲ್ಲಿ ಒಂದು, ಎರಡು ಪ್ರಕರಣಗಳು ಮಾತ್ರ ಇವೆ. ಕಾಯಿಲೆಕಾಣಿಸಿಕೊಂಡ ಪ್ರದೇಶದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿರುವ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದುವರೆಗೆ 4900 ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೆ ಚರ್ಮಗಂಟು ರೋಗದಿಂದ ಯಾವುದೇ ಜಾನುವಾರುಮೃತಪಟ್ಟಿಲ್ಲ.

ಶೀಘ್ರ ಎಲ್ಲ ರಾಸುಗಳಿಗೆ ಲಸಿಕೆ: ರೋಗ ಕಾಣಿಸಿಕೊಂಡ ಊರುಗಳ ವ್ಯಾಪ್ತಿಯ ಎಲ್ಲ ಆಸ್ಪತ್ರೆಗಳ ವೈದ್ಯರು, ಕೆ.ಎಂ.ಎಫ್ ಸಿಬ್ಬಂದಿ ಒಟ್ಟಾಗಿ ಲಸಿಕೆ ನೀಡುವ ಅಭಿಯಾನ ಆರಂಭಿಸಿದ್ದಾರೆ.ಸದ್ಯಕ್ಕೆ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯ ಜಾನುವಾರುಗಳಿಗೆ ಲಸಿಕೆ ಕೊಡಲಾಗುತ್ತಿದೆ. ಶೀಘ್ರದಲ್ಲೇ ತಾಲ್ಲೂಕಿನ ಎಲ್ಲ ಜಾನುವಾರುಗಳಿಗೂ ಲಸಿಕೆ ನೀಡಲಾಗುವುದು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬೈರಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.