ಚಿಕ್ಕಬಳ್ಳಾಪುರ: ‘ಹುಳಿಯಾರಿನಲ್ಲಿ ಬೇರೆ ಊರಿನ ಜನರನ್ನು ಕರೆಸಿ ಕನಕ ವೃತ್ತವನ್ನು ಕೆಡವಿಸುವ ಮೂಲಕ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ದ್ವೇಷ ರಾಜಕೀಯ ಮಾಡುತ್ತಿದ್ದಾರೆ. ಒಂದರೆಡು ಬಾರಿಯಾದರೂ ಸಚಿವರಾಗಿದ್ದರೆ ಅವರಿಗೆ ಪ್ರಜ್ಞೆ ಬರುತ್ತಿತ್ತು. ಮೊದಲ ಬಾರಿಗೆ ಸಚಿವರಾಗಿದ್ದಕ್ಕೆ ಧಿಮಾಕು ತೋರಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಧುಸ್ವಾಮಿ ಅವರಿಗೆ ಸಂವಿಧಾನದ ಅರಿವಿಲ್ಲ. ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸುವ ಸಂದರ್ಭದಲ್ಲಿ ರಾಗ, ದ್ವೇಷ ಮಾಡುವುದಿಲ್ಲ ಎಂದು ಪ್ರಮಾಣ ಸ್ಪೀಕರಿಸಿದ್ದು ಮರೆತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹುಳಿಯಾರು ಘಟನೆ ಬಗ್ಗೆ ಕ್ಷಮೆ ಕೇಳಿದ್ದಾರೆ. ಆದರೆ ಮಾಧುಸ್ವಾಮಿ ಯಡಿಯೂರಪ್ಪ ಅವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳುವ ಪದ ದುರಹಂಕಾರಿ ವರ್ತನೆ ತೋರಿದ್ದಾರೆ’ ಎಂದು ತಿಳಿಸಿದರು.
‘ಕುರುಬ ಸಮುದಾಯದ ಸ್ವಾಮೀಜಿ ಅವರನ್ನು ಸಚಿವ ಮಾಧುಸ್ವಾಮಿ ಅವರು ಏಕವಚನದಲ್ಲಿ ನಿಂದಿಸಿರುವುದು ಕುರುಬ ಸಮಾಜಕ್ಕೆ ನೋವಾಗಿದೆ. ಆದ್ದರಿಂದ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ₹40 ರೂಪಾಯಿಗೆ ಕೂಲಿ ಮಾಡಿದ ಎಂಟಿಬಿ ನಾಗರಾಜ್ ಅವರು ಸಾವಿರಾರು ಕೋಟಿ ಒಡೆಯ ಹೇಗೆ ಆದರು? ಅವರು ಕಾಂಗ್ರೆಸ್ ನಾಯಕರಿಗೆ ಸಾಲ ಕೊಟ್ಟಿದ್ದರೆ ಅದನ್ನು ವಾಪಸ್ ಕೊಡುತ್ತಾರೆ. ಅದನ್ನು ಹೇಳಬೇಕಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.