ADVERTISEMENT

‘ಕನಸಿನ ಮನೆ’ ತೆರವಿಗೆ ಸಜ್ಜು: ತಹಶೀಲ್ದಾರ್ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 14:25 IST
Last Updated 13 ಫೆಬ್ರುವರಿ 2026, 14:25 IST
   

ಮಂಚೇನಹಳ್ಳಿ: ತಾಲ್ಲೂಕಿನ ಗಿಡಗಾನಹಳ್ಳಿ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡ ಮನೆ ತೆರವುಗೊಳಿಸಲು ತಹಶೀಲ್ದಾರ್ ಮುಂದಾಗಿದ್ದಕ್ಕೆ ಬೇಸರಗೊಂಡು ಮನೆ ಮಾಲೀಕ ಮಾತ್ರೆಗಳನ್ನು ಸೇವಿಸಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಧಾಕೃಷ್ಣ ಎಂಬುವವರು ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದರು. ತಹಶೀಲ್ದಾರ್ ಪೂರ್ಣಿಮಾ ಈಚೆಗೆ ಮನೆ ತೆರವುಗೊಳಿಸಲು ಮುಂದಾಗಿದ್ದರು.

‘ಹೆಂಡತಿ ಮತ್ತು ಮಕ್ಕಳ ಜೊತೆ ಸುಖವಾಗಿರಲು ಸುಮಾರು ವರ್ಷಗಳ ಹಿಂದೆ ಸಾಲ ಮಾಡಿ ನನ್ನ ಜಮೀನು ಅಂದುಕೊಂಡ ಸ್ಥಳದಲ್ಲಿ ಕನಸಿನ ಮನೆ ಕಟ್ಟಿರುವೆ. ಆದರೆ ತಹಶೀಲ್ದಾರ್ ಪೂರ್ಣಿಮಾ ಅವರು ಏಕಾಏಕಿ ಬಂದು ಮನೆ ಉರುಳಿಸಲು ಪ್ರಯತ್ನಿಸಿದರು. ಮುಂದಿನ ದಿನಗಳಲ್ಲಿ ಉರುಳಿಸುವುದು ಗ್ಯಾರಂಟಿ ಎಂದು ಹೇಳಿದರು.

ADVERTISEMENT

ಬೆಸ್ಕಾಂ ಇಲಾಖೆಯವರನ್ನು ಕಳುಹಿಸಿ ಯಾವುದೇ ನೋಟಿಸ್ ನೀಡದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹಂತ ಹಂತವಾಗಿ ನನ್ನ ಮನೆ ಉರುಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ನೋಡಿ ಹೃದಯ ಬಡಿತ ಹೆಚ್ಚುತ್ತಿದೆ. ನಾನು ಮರುಗುತ್ತಿದ್ದೇನೆ. ಇದಕ್ಕೆ ಪರೋಕ್ಷವಾಗಿ ಜಿಲ್ಲಾಧಿಕಾರಿ ಒತ್ತಡವಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ. ಇವರ ಅಧಿಕಾರದ ಮುಂದೆ ನನ್ನ ಮನೆ ಉಳಿಯುವುದು ಕಷ್ಟ ಎಂದು ತಿಳಿಯಿತು.

'ನಾನು ನಿರ್ಮಿಸಿರುವ ಮನೆ ಪಕ್ಕದ ಜಮೀನಿನಲ್ಲಿ ನನ್ನ ಸಮಾಧಿ ಮಾಡಲು ಕುಟುಂಬದವರಿಗೆ ತಿಳಿಸಿದ್ದೇನೆ. ಇದಕ್ಕೂ ಅಧಿಕಾರಿಗಳು ಅಡ್ಡ ಬಂದಲ್ಲಿ ನನ್ನ ದೇಹವನ್ನು ಕರೆಂಟ್ ಮೂಲಕ ಸುಟ್ಟು ಹಾಕಲು ತಿಳಿಸಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಒಳ್ಳೆಯ ಸ್ಥಾನ ಮಾನ, ಭವಿಷ್ಯ ಕೊಡದೆ ಹೋಗುತ್ತಿರುವುದಕ್ಕೆ ಕ್ಷಮೆ ಇರಲಿ, ಸಾರಿ ಮಕ್ಕಳೆ" ಎಂದು ರಾಧಾಕೃಷ್ಣ ಪತ್ರ ಬರೆದಿದ್ದಾರೆ.

‘ಗೋಕಾಡಿನ ಹತ್ತು ಗುಂಟೆ ಜಮೀನಿನಲ್ಲಿ ರಾಧಾಕೃಷ್ಣ ಅನಧಿಕೃತವಾಗಿ ಮನೆ  ನಿರ್ಮಿಸಿದ್ದಾರೆ. ಇದು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡುವುದು ಅನಿವಾರ್ಯ. ಇಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಕಟ್ಟಡಗಳಿಗೆ ಈ ಜಮೀನಿನಲ್ಲಿಯೇ ಮುಖ್ಯ ರಸ್ತೆ ನಿರ್ಮಿಸಬೇಕಿದೆ. ಮನೆ ಮಾಲೀಕರು ಪಂಚಾಯಿತಿ ನೀಡಿರುವ ದಾಖಲೆಗಳನ್ನು ನಮಗೂ ಸಹ ನೀಡಿದ್ದಾರೆ" ಎಂದು ತಹಶೀಲ್ದಾರ್ ಪೂರ್ಣಿಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.