ADVERTISEMENT

ಮೇಲೂರು ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನ ಕರಗ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 13:18 IST
Last Updated 27 ಏಪ್ರಿಲ್ 2019, 13:18 IST
ಮೇಲೂರು ಗ್ರಾಮದ ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನ ಕರಗ ಮಹೋತ್ಸವದಲ್ಲಿ ಕರಗದ ಪೂಜಾರಿ ಲಕ್ಕೂರು ಉಮೇಶ್ ಅವರು ವೀರಕುಮಾರರೊಂದಿಗೆ ಪೂಜೆ ಸ್ವೀಕರಿಸಲು ತೆರಳಿದ ಕ್ಷಣ
ಮೇಲೂರು ಗ್ರಾಮದ ಧರ್ಮರಾಯಸ್ವಾಮಿ ದ್ರೌಪತಮ್ಮ ಹೂವಿನ ಕರಗ ಮಹೋತ್ಸವದಲ್ಲಿ ಕರಗದ ಪೂಜಾರಿ ಲಕ್ಕೂರು ಉಮೇಶ್ ಅವರು ವೀರಕುಮಾರರೊಂದಿಗೆ ಪೂಜೆ ಸ್ವೀಕರಿಸಲು ತೆರಳಿದ ಕ್ಷಣ   

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಧರ್ಮರಾಯಸ್ವಾಮಿ ದ್ರೌಪತಮ್ಮ ಅವರ 31ನೇ ವರ್ಷದ ಹೂವಿನ ಕರಗ ಮಹೋತ್ಸವ ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಸುತ್ತಮುತ್ತಲಿನಿಂದ ಬಂದಿದ್ದ ಸಾವಿರಾರು ಭಕ್ತರು ಕರಗಕ್ಕೆ ಸಾಕ್ಷಿಯಾದರು.

ಕರಗ ಮಹೋತ್ಸವದ ಅಂಗವಾಗಿ ಗ್ರಾಮದ ಧರ್ಮರಾಯಸ್ವಾಮಿ ದೇವಾಲಯವೂ ಸೇರಿದಂತೆ ವಿವಿಧ ದೇವಾಲಯಗಳು ಹಾಗೂ ಪ್ರಮುಖ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬುಧವಾರದಂದು ಹಸಿಕರಗ ಮಹೋತ್ಸವ ನಡೆದಿತ್ತು. ಶುಕ್ರವಾರ ನಡೆದ ಹೂವಿನ ಕರಗ ಮಹೋತ್ಸವದ ಅಂಗವಾಗಿ ವಾದ್ಯಗೋಷ್ಠಿ ಆಯೋಜಿಸಿದ್ದರು.

ರಾತ್ರಿ 12 ಗಂಟೆಗೆ ಕರಗದ ಪೂಜಾರಿ ಲಕ್ಕೂರಿನ ಉಮೇಶ್ ಅವರು, ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗವನ್ನು ಹೊತ್ತು ವೀರಕುಮಾರರೊಂದಿಗೆ ಸಾಗಿದರು. ಸರ್ಕಾರಿ ಶಾಲೆಯ ಮೈದಾನದಲ್ಲಿ ಸೇರಿದ್ದ ಜನಸಮೂಹದ ನಡುವೆ ವಾದ್ಯಗೋಷ್ಠಿ ನುಡಿಸಿದ ವಿವಿಧ ಹಾಡುಗಳು, ತಮಟೆ ವಾದನಗಳು, ಮಂಗಳ ವಾದ್ಯಗಳ ತಾಳಕ್ಕೆ ನರ್ತಿಸುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ADVERTISEMENT

ಕರಗವನ್ನು ಹೊತ್ತು ಲಕ್ಕೂರಿನ ಉಮೇಶ್ ತಮಟೆಯ ವಾದನದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂ ಅರ್ಪಿಸಿ, ಆರತಿ ಬೆಳಗುತ್ತಿದ್ದರು.

ಹೂವಿನ ಕರಗ ಮಲ್ಲಿಗೆಮಯ ಕಳಸದ ಮೆರವಣಿಗೆ. ಪರಿಮಳಯುಕ್ತ ಮಲ್ಲಿಗೆ ಹೂವಿಂದ ಅಲಂಕರಿಸಲಾದ ಕರಗವು ಸುವಾಸನೆ ಬೀರುತ್ತ ಅಲೌಕಿಕವಾದ ಸನ್ನಿವೇಶ ಸೃಷ್ಟಿಸಿತ್ತು. ಹೂವಿನ ಕರಗಕ್ಕೂ ಮೊದಲು ಅನೇಕ ಧಾರ್ಮಿಕ ವಿಧಿ ವಿಧಾನಗಳು ಕರಗದ ಕುಂಟೆ ಹಾಗೂ ಶಕ್ತಿ ಪೀಠಗಳಲ್ಲಿ ನಡೆಯಿತು. ವೀರಕುಮಾರರು, ಗೌಡರು, ಗಣಾಚಾರಿ, ಘಂಟೆ ಪೂಜಾರರು ಹಾಗೂ ಚಾಕರಿದಾರರು ಶಕ್ತಿ ಪೀಠದಲ್ಲಿ ಕರಗಕರ್ತ ಪೂಜಾರಿಯನ್ನು ಕರಗ ಧರಿಸುವುದಕ್ಕೆ ಧಾರ್ಮಿಕ ಸಂಪ್ರದಾಯಗಳನ್ನು ಅಣಿಗೊಳಿಸಿದರು.

ಕೆಂಪು ವಸ್ತ್ರಗಳನ್ನು ಧರಿಸಿಕೊಂಡಿದ್ದ ವೀರಕುಮಾರರು, ಕೈಗಳಲ್ಲಿ ಕತ್ತಿಗಳನ್ನು ಹಿಡಿದು ಅಲಗು ಸೇವೆ ನಡೆಸಿಕೊಟ್ಟರು. ಗೋವಿಂದಾ... ಗೋವಿಂದಾ..ಎನ್ನುತ್ತಾ ಕರಗ ಹಿಂಬಾಲಿಸಿದರು.

ಶನಿವಾರ ಬೆಳಿಗ್ಗೆ ಮತ್ತೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಾಪಸ್ ಬಂದ ಕರಗ ಅಗ್ನಿಕುಂಡವನ್ನು ಹಾದು ಹೋದ ನಂತರ ಇಳಿಸಿ ಪೂಜೆ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.