
ಗೌರಿಬಿದನೂರು: ನಗರದ ಎಪಿಎಂಸಿ ಅಧಿಕಾರಿಗಳು ರಾಗಿ ಖರೀದಿಯಲ್ಲಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ರೈತರು ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದರು.
ಸರ್ಕಾರವು ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆ ಘೋಷಿಸಿದೆ. ಆದರೆ ಇಲ್ಲಿನ ಅಧಿಕಾರಿಗಳು ದಲ್ಲಾಳಿ ಮತ್ತು ಖಾಸಗಿ ವ್ಯಾಪಾರಸ್ಥರ ಜತೆ ಶಾಮೀಲಾಗಿ ರೈತರು ಕಷ್ಟಪಟ್ಟು ಬೆಳೆದು ತಂದ ರಾಗಿಗಿಂತ ದಲ್ಲಾಳಿಗಳು ತರುವ ಕಲಬೆರಕೆ ಮತ್ತು ಗುಣಮಟ್ಟವಿಲ್ಲದ ರಾಗಿಯನ್ನು ಯಾವುದೇ ಪರಿಶೀಲನೆ ಮಾಡದೇ ಖರೀದಿಸುತ್ತಿದ್ದಾರೆ. ಆದರೆ ರೈತರು ಬೆಳೆದ ಉತ್ತಮ ಗುಣಮಟ್ಟದ ರಾಗಿಯನ್ನು ವಿನಾಕಾರಣ ನೆಪವೊಡ್ಡಿ ತಿರಸ್ಕರಿಸುತ್ತಿದ್ದಾರೆ ಎಂದು ರೈತರು ದೂರಿದರು.
ರೈತ ವೆಂಕಟರಾಜು ಮಾತನಾಡಿ, ‘ಫೆ.19ರಂದು 43 ಮೂಟೆ ರಾಗಿ ತರಲಾಗಿತ್ತು. ಇಲ್ಲಿನವರು ಹೊರಗಡೆ ತೂಕ ಹಾಕಿಸಿಕೊಂಡು ಬರುವಂತೆ ತಿಳಿಸಿದರು. ತೂಕ ಹಾಕಿಸಿಕೊಂಡು ಬಂದ ನಂತರ ರಾಗಿ ಇನ್ನು ಒಣಗಿಲ್ಲ ಎಂದು ರಾಗಿ ತಂದಿದ್ದ ವಾಹನವನ್ನು ಪಕ್ಕದಲ್ಲಿ ನಿಲ್ಲಿಸಲು ಹೇಳಿದರು. ಬಳಿಕ ಸಿದ್ದೇಶ್ ಎನ್ನುವ ವ್ಯಕ್ತಿ ಬಂದು ಆನಂದ್ ಎಂಬುವವರಿಗೆ ನಾಲ್ಕು ಸಾವಿರ ಹಣ ನೀಡಲು ಹೇಳಿದರು. ಫೋನ್ ಪೇ ಮೂಲಕ ₹3ಸಾವಿರ ಹಾಕಿದ್ದೇನೆ. ಶನಿವಾರವೂ ಒಂದೊಂದು ಟ್ರ್ಯಾಕ್ಟರ್ ರಾಗಿಗೆ ₹2 ಸಾವಿರ ವಸೂಲಿ ಮಾಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ರೈತರಿಗೆ ವಂಚನೆ ಮಾಡುವುದರ ಜತೆಗೆ ಕಿರುಕುಳ ನೀಡುತ್ತಿದ್ದಾರೆ’ ಎಂದರು.
‘ಇಲ್ಲಿನ ಅಧಿಕಾರಿಗಳು ರೈತರು ತರುವ ರಾಗಿ ಗುಣಮಟ್ಟವಿಲ್ಲ, ಒಣಗಿಲ್ಲ, ದೂಳು ತುಂಬಿದೆ ಎಂದು ತಿರಸ್ಕರಿಸುತ್ತಾರೆ. ಅದೇ ರಾಗಿಯನ್ನು ಖಾಸಗಿ ವ್ಯಕ್ತಿಗಳು ಖರೀದಿ ಮಾಡಿ ತಂದರೆ ಪ್ರಶ್ನೆ ಮಾಡದೇ ಖರೀದಿ ಮಾಡುತ್ತಿದ್ದಾರೆ. 52 ಕೆ.ಜಿ ರಾಗಿ ಮೂಟೆಗೆ 50 ಕೆ.ಜಿ ಲೆಕ್ಕ ತೋರಿಸುತ್ತಿದ್ದಾರೆ. ಟ್ರ್ಯಾಕ್ಟರ್ನಿಂದ ಕೆಳಗಿಳಿಸಲು ಒಂದು ಮೂಟೆಗೆ ₹15 ಕೂಲಿ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಇದೇ ರೀತಿ ಮುಂದುವರಿದರೆ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು’ ಎಂದು ರೈತ ಗಂಗರಾಜು ಹೇಳಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅರವಿಂದ್, ‘ಅಧಿಕಾರಿಗಳಿಗೆ ರೈತರ ರಾಗಿಯನ್ನು ಸರಿಯಾಗಿ ಪರಿಶೀಲಿಸಿ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಬೆಂಬಲ ಬೆಲೆ ನೀಡಬೇಕು. ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.