ಗೌರಿಬಿದನೂರು: ‘ಇನ್ನು ಎರಡು ವರ್ಷದಲ್ಲಿ ಎತ್ತಿನಹೊಳೆ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸಲಾಗುವುದು’ ಎಂದು ಶಾಸಕ ಕೆ.ಎಚ್ ಪುಟ್ಟಸ್ವಾಮಿ ಗೌಡ ತಿಳಿಸಿದರು.
ಬುಧವಾರ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎತ್ತಿನಹೊಳೆ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, ಎರಡು ವರ್ಷದ ಒಳಗೆ ನೀರು ಹರಿಸಿ, ತಾಲ್ಲೂಕಿನ ಜನರ ನೀರಿನ ಬವಣೆಯನ್ನು ತೀರಿಸುವುದಾಗಿ ತಿಳಿಸಿದರು.
‘ಪ್ರತಿ ತಿಂಗಳು ತಾಲ್ಲೂಕು ಆಡಳಿತ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕಾನೂನು ತೊಡಕು ಇರುವ ಸಮಸ್ಯೆಗಳನ್ನು ಬಿಟ್ಟು ಉಳಿದ ಶೇ 80ರಷ್ಟು ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಷ್ಕರಿಸಲಾಗಿದೆ. ಅಧಿಕಾರಿಗಳು ಯಾವುದೇ ಕೆಲಸವನ್ನು ವಿಳಂಬ ಮಾಡಿದ್ದಲ್ಲಿ ನೇರವಾಗಿ ಗಮನಕ್ಕೆ ತಂದರೆ ಬಗೆಹರಿಸಿಕೊಡಲಾಗುವುದು’ ಎಂದರು.
ತಹಶೀಲ್ದಾರ್ ಮಹೇಶ್ ಪತ್ರಿ ಮಾತನಾಡಿ, ‘ತಾಲ್ಲೂಕಿನಲ್ಲಿರುವ ಕೃಷ್ಣರಾಜಾಪುರ, ಹುಣಸೆನಹಳ್ಳಿ, ಕೋಡಿಹಳ್ಳಿ ಜೋಡಿ ಗ್ರಾಮಗಳ ಸಮಸ್ಯೆಯನ್ನು ಕಾನೂನು ಪ್ರಕಾರ ಇತ್ಯರ್ಥ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳು ರೈತರ ಹೆಸರಿನಲ್ಲಿ ಇದ್ದರೂ ಸಹ ಅಧಿಕಾರಿಗಳ ವರ್ಗಾವಣೆಯಿಂದ ಜೋಡಿ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ವಿಳಂಬವಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಜೆ.ಕೆ ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.