ಚಿಕ್ಕಬಳ್ಳಾಪುರ: ‘ಪುಸ್ತಕ, ಓದಿನಿಂದ ಮಕ್ಕಳು ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಅವುಗಳು ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತ. ಉತ್ತಮ ಜೀವನ ಸಾಗಿಸಲು ಬೇಕಾಗಿರುವುದು ಪ್ರೇರಣೆ ಅಂಶಗಳು ಮಾತ್ರ’ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎನ್.ಶಿವರಾಂರೆಡ್ಡಿ ತಿಳಿಸಿದರು.
ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಶನಿವಾರ ಆಯೋಜಿಸಿದ ‘ಕೃಷ್ಣ ಜನ್ಮಾಷ್ಟಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಾಲೆಯಲ್ಲಿ ಕಲಿಸುವ ಪಾಠದಿಂದಲೇ ಮಕ್ಕಳ ಭವಿಷ್ಯ ಅರ್ಥಪೂರ್ಣವಾಗದು. ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುವಂತಹ ಚಟುವಟಿಕೆಗಳನ್ನು ಶಾಲೆಗಳಲ್ಲಿ ರೂಪಿಸಬೇಕು. ಜತೆಗೆ ಪೋಷಕರು ತಮ್ಮ ಮಗುವಿನ ಭಾವನೆ ಅರಿತು ಅವರ ಆಸೆಗಳನ್ನು ಈಡೇರಿಸಲು ಸಹಕರಿಸಬೇಕು’ ಎಂದು ಹೇಳಿದರು.
‘ಮಕ್ಕಳಿಗೆ ಸಂಭ್ರಮ, ಸಡಗರಗಳಿಂತಲೂ ಕಹಿ ನೆನಪುಗಳೇ ಅತಿಯಾಗಿ ಜ್ಞಾಪಕವಿರುತ್ತವೆ. ಆದ್ದರಿಂದ ಪೋಷಕರು ಮಕ್ಕಳ ಮನ ಮುದಗೊಳಿಸುವ ಹಬ್ಬಗಳು ಯಾವಾಗ ಬರುತ್ತವೆ ಎಂದು ಎದುರು ನೋಡುತ್ತಿರಬೇಕು. ತಮ್ಮ ಮಗುವನ್ನು ಈ ಹಬ್ಬದಲ್ಲಿ ಕೃಷ್ಣನ ಬಗೆ ಬಗೆಯ ವೇಷಭೂಷಣಗಳಿಂದ ಅಲಂಕರಿಸಿ, ಅವರ ತುಂಟಾಟ ಕಂಡು ಸಂಭ್ರಮಿಸಬೇಕು. ಮಕ್ಕಳಿಗೆ ಆತ್ಮಸ್ಥೆರ್ಯ, ಪ್ರೇರಣೆ ತುಂಬುವ ಹಬ್ಬಗಳ ಆಚರಣೆಗೆ ಪೋಷಕರು ಒತ್ತು ನೀಡಬೇಕು’ ಎಂದು ತಿಳಿಸಿದರು.
ಬಿಜಿಎಸ್ ಆಂಗ್ಲ ಶಾಲೆ ಪ್ರಾಂಶುಪಾಲ ಮೋಹನ್ ಕುಮಾರ್, ಪಿಯು ಕಾಲೇಜು ಪ್ರಾಂಶುಪಾಲ ಮಧುಸೂಧನ್, ಹಾಸ್ಟೆಲ್ ವಾರ್ಡನ್ ರಾಜು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.