ಗೌರಿಬಿದನೂರು: ಮುಂಗಾರು ಆರಂಭದಲ್ಲಿ ಬಿತ್ತಿದ್ದ ಬೀಜವು ಬೆಳೆಯಾಗಿ ಫಸಲು ರೈತರ ಕೈ ಸೇರಿದೆ. ನಿರೀಕ್ಷಿತ ಮಟ್ಟದಲ್ಲಿ ಬೆಳೆಯಾಗದಿದ್ದರೂ ದೊರೆತ ಬೆಳೆಯನ್ನು ಹಸನು ಮಾಡಲು ರೈತರು ಗ್ರಾಮದ ಗ್ರಾಮ ಸಡಕ್, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಅವಲಂಬಿತವಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ರಸ್ತೆಗಳನ್ನೇ ಒಕ್ಕಣೆ ಕಣಗಳನ್ನಾಗಿ ಮಾಡಿಕೊಂಡಿದ್ದಾರೆ.
ರೈತರು ಬೆಳೆದಿರುವ ಮುಸುಕಿನ ಜೋಳ, ರಾಗಿ, ನೆಲಗಡಲೆ, ಭತ್ತ, ಹುರುಳಿ, ಬಿಳಿಜೋಳ, ಅವರೆ, ತೊಗರಿ, ಅಲಸಂದೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಹಸನು ಮಾಡಲು ಜಮೀನುಗಳಲ್ಲಿ ಅವಕಾಶವಿಲ್ಲದೆ ಪರಿತಪಿಸುವಂತಾಗಿದೆ. ಇದಕ್ಕೆ ಪರ್ಯಾಯವಾಗಿ ಜಮೀನಿನ ಸಮೀಪವಿರುವ ಶಾಲಾ ಆವರಣ, ದೇವಸ್ಥಾನದ ಅಂಗಳ ಹಾಗೂ ರಸ್ತೆ ಬದಿಗಳನ್ನು ಅವಲಂಬಿಸಿದ್ದಾರೆ.
ಸರ್ಕಾರವು ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಸಮೀಪದಲ್ಲಿನ ಸರ್ಕಾರಿ ಭೂಮಿಯಲ್ಲಿ ನರೇಗಾ ಯೋಜನೆಯಡಿ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಹುತೇಕ ಒಕ್ಕಣೆ ಕಣಗಳು ಅವೈಜ್ಞಾನಿಕವಾಗಿ ಗ್ರಾಮಗಳ ಹೊರವಲಯದ ನಿರ್ಜನ ಪ್ರದೇಶಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸ್ಥಳಗಳಿಗೆ ರೈತರು ಬೆಳೆಗಳನ್ನು ಕೊಂಡೊಯ್ದು ಹಸನು ಮಾಡಿಕೊಳ್ಳಲುಸಾಧ್ಯವಾಗುವುದಿಲ್ಲ. ಆದ್ದರಿಂದ ರೈತರು ಸಮೀಪದ ರಸ್ತೆಗಳನ್ನೇ ಅವಲಂಬಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.