ADVERTISEMENT

ಕೆರೆಯಲ್ಲ, ಜಾಲಿ ಗಿಡಗಳ ವನ!

ಗೌಡನ ಕೆರೆ ಉಳಿವಿಗೆ ಇಂದು ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 7:45 IST
Last Updated 5 ಜುಲೈ 2021, 7:45 IST
ಗೌಡನ ಕೆರೆಯನ್ನು ಆವರಿಸಿರುವ ಜಾಲಿಮರಗಳು ಹಸಿರು ಚಾದರವನ್ನು ಕೆರೆಗೆ ಹೊದ್ದಿಸಿದಂತೆ ಕಾಣಿಸುತ್ತದೆ
ಗೌಡನ ಕೆರೆಯನ್ನು ಆವರಿಸಿರುವ ಜಾಲಿಮರಗಳು ಹಸಿರು ಚಾದರವನ್ನು ಕೆರೆಗೆ ಹೊದ್ದಿಸಿದಂತೆ ಕಾಣಿಸುತ್ತದೆ   

ಶಿಡ್ಲಘಟ್ಟ: ನಗರದ ಆಗ್ನೇಯ ದಿಕ್ಕಿನಲ್ಲಿರುವ ಗೌಡನಕೆರೆಗೆ 480 ವರ್ಷಗಳ ಇತಿಹಾಸವಿದೆ. ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ ಇದಕ್ಕೆ ‘ಗೌಡನ ಕೆರೆ’ ಎಂಬ ಹೆಸರು ಬಂತೆಂದು ದಾಖಲಾಗಿದೆ.

ಒಂದೆಡೆ ಇತಿಹಾಸ ಪ್ರಸಿದ್ಧಕೆರೆಯಲ್ಲಿಈಗ ಜಾಲಿ ಗಿಡಗಳದ್ದೇ ಕಾರುಬಾರು. ಕೆರೆಯ ಒಳಗೆ ಮನುಷ್ಯರಿರಲಿ ಜಾನುವಾರುಗಳೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಒತ್ತುವರಿಗೆ ಈಡಾಗಿ ವಿಸ್ತೀರ್ಣ ಕಿರಿದಾಗುತ್ತಿದೆ.ಕೆರೆಯು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಪರಿಣಾಮ ಕೆರೆಯ ತುಂಬ ಹೆಮ್ಮರವಾಗಿ ಜಾಲಿ ಗಿಡಗಳು ಬೆಳೆದು ಅದರ ಅಸ್ತಿತ್ವವನ್ನೇ ಅಣಕಿಸುತ್ತಿವೆ. ಇದೇನು ಕೆರೆಯೋ ಅಥವಾ ಜಾಲಿ ಗಿಡಗಳ ವನವೋ ಎಂಬ ಅನುಮಾನ ಕಾಡುವಂತಿದೆ.

ಇದೀಗ ಆನೂರು ಹಾಗೂ ಸುತ್ತಮುತ್ತಲಿನ ಗೌಡನ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸೇರಿಕೊಂಡುಗೌಡನಕೆರೆ ಸಂರಕ್ಷಣಾ ಸಮಿತಿ ರಚಿಸಿದ್ದಾರೆ. ತಾಲ್ಲೂಕಿನ ಎಲ್ಲಾ ರೈತ ಸಂಘಟನೆಗಳ ಬೆಂಬಲದೊಂದಿಗೆ ‘ಕೆರೆ ಉಳಿಸಿ ಆಂದೋಲನಕ್ಕೆ ಕೈಜೋಡಿಸಿ’ ಎಂಬ ಘೋಷವಾಕ್ಯದೊಂದಿಗೆ ಹೋರಾಟಕ್ಕೆ ಮುಂದಾಗಿದ್ದಾರೆ. ಸೋಮವಾರ ಗೌಡನಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕೆರೆಯ ಸಮೀಪ ಬೃಹತ್ ಪ್ರತಿಭಟನೆಯನ್ನು ಆಯೋಜಿ
ಸಲಾಗಿದೆ.

ADVERTISEMENT

ಸಣ್ಣ ನೀರಾವರಿ ಇಲಾಖೆಯಿಂದ ಗೌಡನಕೆರೆಯು ಹೇಗೋ ತಪ್ಪಿಹೋಗಿ ಡೀಮ್ಡ್ ಅರಣ್ಯಕ್ಕೆ ಸೇರಿಕೊಂಡಿದೆ. ಆದರೆ, ಅರಣ್ಯ ಇಲಾಖೆಯವರು ಒತ್ತುವರಿ ತೆರವಿಗೂ ಮುಂದಾಗದೆ, ಜಾಲಿ ಮರಗಳನ್ನೂ ತೆಗೆಯದೆ ನಿರುಪಯುಕ್ತವಾಗಿದೆ.

ಈ ಕೆರೆಯುಸುಮಾರು 99 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಸುತ್ತಮುತ್ತ ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಅವಕಾಶವಿದೆ. ಈ ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ನಗರಕ್ಕೆ ನೀರು ಸರಬರಾಜು ಮಾಡುವ ಹಲವಾರು ಕೊಳವೆಬಾವಿಗಳು ಹಾಗೂ ಸುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆದರೆ, ದಶಕಗಳಿಂದಲೂ ಮಳೆ ಕೊರತೆಯಿಂದ ಕೆರೆಗೆ ನೀರು ಬಾರದೆ ಯಥೇಚ್ಛವಾಗಿ ಜಾಲಿಗಿಡಗಳು ಬೆಳೆದಿವೆ. ಕಾಲಕಾಲಕ್ಕೆ ಇವುಗಳನ್ನು ತೆರವು ಮಾಡದ ಪರಿಣಾಮ ಇಡೀ ಕೆರೆಯನ್ನೇ ಆಕ್ರಮಿಸಿವೆ.

ಪ್ರತಿವರ್ಷ ಬೀಳುವ ಅಲ್ಪಸ್ವಲ್ಪ ಮಳೆಗೆ ಕೆರೆಯ ಕೆಲ ಗುಂಡಿಗಳಿಗೆ ನೀರು ತುಂಬುತ್ತವಾದರೂ ಕೆರೆಯಲ್ಲಿ ಜಾಲಿ ಮರಗಳು ಪೊದೆಗಳಂತೆ ಇರುವುದರಿಂದ ಜಾನುವಾರುಗಳು ಕೆರೆಗೆ ಹೋಗಿ ನೀರು ಕುಡಿಯಲಾಗದ ಸ್ಥಿತಿ ಏರ್ಪಟ್ಟಿದೆ. ಅಪ್ಪಿತಪ್ಪಿ ಅವು ಕೆರೆಗೆ ಇಳಿದರೆ ಕೆರೆಯಿಂದ ವಾಪಸ್‌ ಬರುತ್ತವೆ ಎನ್ನುವ ನಂಬಿಕೆ ಇಲ್ಲದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.