ADVERTISEMENT

ಚಿಂತೆಗೀಡಾದ ಗುಲಾಬಿ ಈರುಳ್ಳಿ ಬೆಳೆಗಾರರು

ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ, ಗುಲಾಬಿ ಈರುಳ್ಳಿ ರಫ್ತಿಗೆ ವಿನಾಯಿತಿ ನೀಡುವಂತೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 8:46 IST
Last Updated 21 ಸೆಪ್ಟೆಂಬರ್ 2020, 8:46 IST
ಚಿಂತಾಮಣಿ ತಾಲ್ಲೂಕಿನ ಜಮೀನೊಂದರಲ್ಲಿ ಗುಲಾಬಿ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು
ಚಿಂತಾಮಣಿ ತಾಲ್ಲೂಕಿನ ಜಮೀನೊಂದರಲ್ಲಿ ಗುಲಾಬಿ ಈರುಳ್ಳಿ ಸ್ವಚ್ಛಗೊಳಿಸುತ್ತಿರುವ ಕಾರ್ಮಿಕರು   

ಚಿಕ್ಕಬಳ್ಳಾಪುರ: ಬಳ್ಳಾರಿ ಭಾಗದ ಈರುಳ್ಳಿ ಬೆಲೆ ಗಗನಮುಖಿಯಾದ ಕಾರಣಕ್ಕೆ ಬೆಲೆ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿರುವುದು ಬೆಂಗಳೂರು ಕೆಂಪು ಗುಲಾಬಿ ಈರುಳ್ಳಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಚಿಕ್ಕ ಗಾತ್ರ, ಅಧಿಕ ಘಾಟು, ಹೆಚ್ಚು ನಾರಿನಂಶ ಹಾಗೂ ಆಕರ್ಷಕ ಬಣ್ಣದಂತಹ ಗುಣ ವಿಶೇಷತೆಯಿಂದ ಭೌಗೋಳಿಕ ಗುರುತಿನ (ಜಿಐ) ಮಾನ್ಯತೆ ಗಳಿಸಿರುವ, ರಫ್ತು ಆಧಾರಿತ ಬೆಳೆಯಾಗಿರುವ ಗುಲಾಬಿ ಈರುಳ್ಳಿಯನ್ನು ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲದೇ, ನೆರೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿ ಕೂಡ ಬೆಳೆಯಲಾಗುತ್ತದೆ.

ಗುಲಾಬಿ ಈರುಳ್ಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ತುಂಬಾ ಕಡಿಮೆ. ವಿದೇಶಿ ಮಾರುಕಟ್ಟೆಗಳಲ್ಲಿ ಬಲು ಬೇಡಿಕೆ ಇದೆ. ಹೀಗಾಗಿ, ಮಲೇಶಿಯಾ, ಸಿಂಗಾಪುರ, ಇಂಡೋನೇಷಿಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಗೆ ರಾಜ್ಯದಿಂದ ವಾರ್ಷಿಕ 50 ಸಾವಿರ ಟನ್‌ ಗುಲಾಬಿ ಈರುಳ್ಳಿ ರಫ್ತಾಗಿ, ಇತರೆ ಈರುಳ್ಳಿಗಿಂತ ಹೆಚ್ಚು ವಿದೇಶಿ ವಿನಿಮಯ ಗಳಿಸುತ್ತದೆ.

ADVERTISEMENT

ಗುಲಾಬಿ ಈರುಳ್ಳಿಯನ್ನು ಸ್ಥಳೀಯ ಕೆಲ ವ್ಯಾಪಾರಿಗಳು ಖರೀದಿಸಿ ಚೆನ್ನೈನ ಸಗಟು ವರ್ತಕರಿಗೆ ಮಾರುತ್ತಾರೆ. ಚೆನ್ನೈನಿಂದ ವಿದೇಶಗಳಿಗೆ ಈರುಳ್ಳಿ ರಫ್ತಾಗುತ್ತದೆ. ಸದ್ಯ ಜಿಲ್ಲೆಯಲ್ಲಿ ಗುಲಾಬಿ ಈರುಳ್ಳಿ ಎರಡನೇ ಋತುವಿನ ಬೆಳೆ ಕೊಯ್ಲು ಆರಂಭವಾಗಿದೆ.

ವಾರದ ಹಿಂದೆ 50 ಕೆ.ಜಿ ಈರುಳ್ಳಿ ಬ್ಯಾಗ್‌ ಸುಮಾರು ₹1,300 ವರೆಗೆ ಬೆಲೆ ಸಿಕ್ಕು ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಸೆ.14 ರಂದು ಈರುಳ್ಳಿ ರಫ್ತು ನಿರ್ಬಂಧಿಸಿದ ಬೆನ್ನಲ್ಲೇ ಗುಲಾಬಿ ಈರುಳ್ಳಿ ಕೇಳುವವರಿಲ್ಲದಂತಾಗಿದೆ. ಪರಿಣಾಮ, ಪ್ರಸ್ತುತ 50 ಕೆ.ಜಿ ಈರುಳ್ಳಿ ಬ್ಯಾಗ್‌ ಬೆಲೆ ₹400 ರಿಂದ ₹500ಕ್ಕೆ ಕುಸಿದು ರೈತರನ್ನು ಚಿಂತೆಗೀಡು ಮಾಡಿದೆ.

ಕೇಂದ್ರ ಸರ್ಕಾರದ ನಿರ್ಧಾರದಿಂದ ದಿಕ್ಕೆಟ್ಟ ಈರುಳ್ಳಿ ಬೆಳೆಗಾರರು ಇತ್ತೀಚೆಗೆ ಸಂಸದ ಎಂ.ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೆಹಲಿಗೆ ನಿಯೋಗ ಹೋಗಿ ಹಲವು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಗುಲಾಬಿ ಈರುಳ್ಳಿ ರಫ್ತು ನಿರ್ಬಂಧ ತೆರವಿಗೆ ಆಗ್ರಹಿಸಿದ್ದಾರೆ. ಈವರೆಗೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ನಿಲುವು ಪ್ರಕಟಿಸಿಲ್ಲ.

‘ಗುಲಾಬಿ ಈರುಳ್ಳಿಯ ಮೊದಲ ಬೆಳೆ ಮಾರ್ಚ್‌–ಜುಲೈನಲ್ಲಿ ಕೊಯ್ಲು ಆಗುತ್ತದೆ. ಎರಡನೇ ಬೆಳೆಯ ಕೊಯ್ಲು ಆಗಸ್ಟ್–ನವೆಂಬರ್‌ನಲ್ಲಿ ನಡೆಯುತ್ತದೆ. ಮಾರ್ಚ್‌ನಿಂದ ಈವರೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 40 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ರಫ್ತಾಗಿದೆ. ಇನ್ನೂ 10 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚು ಈರುಳ್ಳಿ ರಫ್ತಾಗಬೇಕಿದೆ’ ಎನ್ನುತ್ತಾರೆ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ.

‘ಸತತ ಬರಗಾಲ, ಅಂತರ್ಜಲ ಕುಸಿತ, ನೀರಿನ ಕೊರತೆ ನಡುವೆಯೂ ರೈತರು ಒಂದು ಎಕರೆಗೆ ಕನಿಷ್ಠ ₹1 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದಾರೆ. ಕೊಯ್ಲು ಮುಗಿದು ಒಂದು ತಿಂಗಳಲ್ಲಿ ಈರುಳ್ಳಿ ಮಾರಾಟವಾಗಬೇಕು. ಇಲ್ಲದಿದ್ದರೆ ಕೊಳೆತು ಹೋಗುತ್ತದೆ. ಈಗಾಗಲೇ ಸುಮಾರು 5,000 ಟನ್ ಈರುಳ್ಳಿ ಕೊಳೆದಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ರಫ್ತು ನಿಷೇಧ ತೆರವಿಗೆ ಕ್ರಮಕೈಗೊಂಡು ಬೆಳೆಗಾರರ ಹಿತ ಕಾಯಬೇಕು’ ಎಂದು ಆಗ್ರಹಿಸಿದರು.


ಅಂಕಿಅಂಶಗಳು...

10 ಸಾವಿರ ಹೆಕ್ಟರ್‌
ರಾಜ್ಯದಲ್ಲಿ ಗುಲಾಬಿ ಈರುಳ್ಳಿ ಬೆಳೆಯುವ ಪ್ರದೇಶ

60 ಸಾವಿರ ಟನ್‌
ವಾರ್ಷಿಕ ಉತ್ಪಾದನೆ

50 ಸಾವಿರ ಟನ್‌
ವಾರ್ಷಿಕ ವಿದೇಶಕ್ಕೆ ಈರುಳ್ಳಿ ರಫ್ತಾಗುವ ಪ್ರಮಾಣ

₹60 ಕೋಟಿ
ವಾರ್ಷಿಕ ವಿದೇಶಿ ವಿನಿಮಯ ಗಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.