ADVERTISEMENT

ಶಿಡ್ಲಘಟ್ಟ | ಬೆಲೆ ಕುಸಿತ; ಈರುಳ್ಳಿ ಬೆಳೆದ ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:25 IST
Last Updated 16 ಜುಲೈ 2025, 5:25 IST
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ರೈತರು ಈರುಳ್ಳಿ ಬೆಳೆದಿದ್ದು, ರಾಶಿ ಹಾಕಿಕೊಂಡು ಸಮರ್ಪಕ ಬೆಲೆಗಾಗಿ ಕಾಯುತ್ತಿದ್ದಾರೆ
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ರೈತರು ಈರುಳ್ಳಿ ಬೆಳೆದಿದ್ದು, ರಾಶಿ ಹಾಕಿಕೊಂಡು ಸಮರ್ಪಕ ಬೆಲೆಗಾಗಿ ಕಾಯುತ್ತಿದ್ದಾರೆ   

ಶಿಡ್ಲಘಟ್ಟ: ಸಾಮಾನ್ಯವಾಗಿ ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರುತ್ತದೆ. ಆದರೆ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆದ ರೈತರು ಬೆಳೆಯ ಕುಸಿತದಿಂದಾಗಿ ಹಾಕಿದ ಹಣವೆಲ್ಲಾ ನಷ್ಟವಾಗಿ ಕಣ್ಣೀರಿಡುತ್ತಿದ್ದಾರೆ.

ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ರೈತರು ಈರುಳ್ಳಿ ಬೆಳೆದಿದ್ದಾರೆ. ಕಳೆದ ಮೂರು ತಿಂಗಳಿಂದ ಈಗ ಬೆಲೆ ಬರುತ್ತದೆ, ನಾಳೆ ಬೆಳೆ ಬರುತ್ತದೆ ಎನ್ನುತ್ತಾ ಆಶಾಭಾವನೆಯಿಂದ ಈರುಳ್ಳಿಗಳನ್ನು ಚೀಲಕ್ಕೆ ಹಾಕಿಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ ಒಂದೆಡೆ ಕೊಳೆತು ಹೋಗುತ್ತಿರುವ ಈರುಳ್ಳಿ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಇರದಿರುವುದು ಅವರನ್ನು ಹೈರಾಣಾಗಿಸಿದೆ.

ಅಲಗುರ್ಕಿ ಗ್ರಾಮದ ಮಾರಪ್ಪರೆಡ್ಡಿ, ರಘುನಾಥರೆಡ್ಡಿ, ನಂದೀಶರೆಡ್ಡಿ, ನಾರಾಯಣಸ್ವಾಮಿ, ಮೂರ್ತಿ ಮುಂತಾದ ರೈತರು ಈರುಳ್ಳಿಯನ್ನು ರಾಶಿ ಹಾಕಿಕೊಂಡು ತಲೆ ಮೇಲೆ ಕೈಹೊತ್ತು ದಿಕ್ಕು ತೋಚದೆ ಕುಳಿತಿದ್ದಾರೆ.

ADVERTISEMENT

‘ಒಂದು ಸೇರಿಗೆ ₹500ರಂತೆ, 25 ಸೇರು ಈರುಳ್ಳಿಯನ್ನು ನಾಟಿ ಮಾಡಿದ್ದೆವು. 250 ಮೂಟೆಯಷ್ಟು ಈರುಳ್ಳಿ ಬೆಳೆದಿದ್ದೆವು. ಮೂರು ತಿಂಗಳು ಕಾದರೂ ಬೆಲೆ ಬಂದಿಲ್ಲ. ಸಾಕಷ್ಟು ಈರುಳ್ಳಿ ಕೊಳೆತು ಹೋಗಿ ಈಗ 170 ಮೂಟೆಗಳಷ್ಟು ಮಾತ್ರ ಉಳಿದಿದೆ. ನಾಲ್ಕು ತಿಂಗಳು ಬೆಳೆ ಬೆಳೆದು, ಮೂರು ತಿಂಗಳಿಂದ ಕಾದಿರುವ ನಮಗೆ ಈಗ ಏನು ಮಾಡುವುದೋ ತೋಚುತ್ತಿಲ್ಲ’ ಎಂದು ರೈತ ರಘುನಾಥರೆಡ್ಡಿ ತಮ್ಮ ಅಳಲನ್ನು ತೋಡಿಕೊಂಡರು.

‘ಎರಡು ಲಕ್ಷ ರೂ ಬಂಡವಾಳ ಹಾಕಿದ್ದೇವೆ. ಆದರೆ ಈಗ ಮಾರಿದರೆ ಸುಮಾರು ಮೂವತ್ತು ಸಾವಿರ ಸಿಗಬಹುದಷ್ಟೇ. ಕೊಳ್ಳುವವರು ಇತ್ತ ತಲೆ ಹಾಕುತ್ತಿಲ್ಲ. ಕಳೆದ ವರ್ಷ ಎರಡು ಸಾವಿರ ರೂ ಇದ್ದ ಒಂದು ಮೂಟೆ ಈಗ ₹300 ಆಗಿದೆ. ನಮ್ಮ ಹಳ್ಳಿಯ ಸುತ್ತಮುತ್ತ ಸಾವಿರಾರು ಮೂಟೆಗಳು ರೈತರು ಬೆಳೆದ ಈರುಳ್ಳಿ ಇವೆ. ಇನ್ನು ಇವನ್ನು ಶೇಖರಿಸಿಡಲು ಸಾಧ್ಯವಿಲ್ಲ’ ಎಂದರು. 

ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೆಚ್ಚಿನ ಇಳುವರಿ, ಇತರ ರಾಜ್ಯಗಳಿಂದ ಆವಕ, ಮಧ್ಯವರ್ತಿಗಳ ಹಾವಳಿ ಮುಂತಾದ ಕಾರಣಗಳಿಂದ ಈರುಳ್ಳಿ ಬೆಳೆ ಕುಸಿದಿದೆ.

‘ಈರುಳ್ಳಿ ಬೆಲೆ ಕುಸಿತದಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಸಾಲಗಾರರಾಗುವ ಭೀತಿ ಎದುರಾಗಿದೆ. ಮನನೊಂದ ರೈತರು ಬೆಳೆದ ಬೆಳೆಯನ್ನು ನಾಶಪಡಿಸುತ್ತಿದ್ದಾರೆ. ಸರ್ಕಾರ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನಿಗದಿಪಡಿಸಬೇಕು. ಈರುಳ್ಳಿ ಶೇಖರಿಸಿಡಲು ಸೂಕ್ತವಾದ ಶೈತ್ಯಾಗಾರ ನಿರ್ಮಿಸಬೇಕು. ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಿ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು. ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ರೈತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.