ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ತಾಲ್ಲೂಕಿನ ರೈತ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಮಕ್ಕಾಂ ಕರ್ನಾಟಕ, ನಮ್ಮೂರ ಭೂಮಿ ನಮಗಿರಲಿ, ಐಕ್ಯ ಹೋರಾಟ ಸಮಿತಿಗಳ ಪರವಾಗಿ ಮಹಿಳಾ ರೈತ ದಿನಾಚರಣೆ ಮೂಲಕ ದೆಹಲಿ ರೈತ ಹೋರಾಟ ಬೆಂಬಲಿಸಿ ಘೋಷಣೆ ಕೂಗಿದರು.
ತಾಲ್ಲೂಕಿನ ದೋಮಲಪಲ್ಲಿ, ಬಂಡಕೋಟೆ, ನಾಯನಹಳ್ಳಿ, ಮಹಮದ್ಪುರ, ನಾಗಸಂದ್ರಗಡ್ಡೆ, ಧನಮಿಟ್ಟೇನಹಳ್ಳಿ, ದ್ವಾರಪ್ಪಲ್ಲಿ, ಚೌಡದೇನಹಳ್ಳಿ, ಶೆಟ್ಟಿಹಳ್ಳಿ, ಭಕ್ತರಹಳ್ಳಿ, ಮೈಲಾಪುರ ಸೇರಿದಂತೆ ಹಲವಾರು ಗ್ರಾಮಗಳ ಮಹಿಳೆಯರು ಸಭೆ ಸೇರಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಮನವಿಪತ್ರ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಶಶಿರಾಜ್, ಬಂಡಕೋಟೆಯಲ್ಲಿ ಮಾತನಾಡಿದ ಸಮಿತಿಯ ಸುಮಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದನದಲ್ಲಿ ಸೂಕ್ತ ಚರ್ಚೆಯಿಲ್ಲದೇ ಏಕಾಏಕಿ ಕಾಯ್ದೆಗಳಿಗೆ ಅನುಮೋದನೆ ಪಡೆದುಕೊಂಡಿದ್ದಾರೆ ಎಂದು ದೂರಿದರು.
ಸಮಿತಿಯ ಪರವಾಗಿ ಸಿ. ರೇಣುಕಾ, ನಾಗೇಶ್, ಅಂಬರೀಶ್, ಬಾಬುರೆಡ್ಡಿ, ನಾಗರಾಜು, ಚೌಡಪ್ಪ, ಹರೀಶ್, ದೇವಪ್ಪ, ನರಸಿಂಹಮೂರ್ತಿ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.