ಪ್ರಾತಿನಿಧಿಕ ಚಿತ್ರ
ಚಿಂತಾಮಣಿ: ನಗರಠಾಣೆ ಪೊಲೀಸರ ಮಧ್ಯಪ್ರವೇಶದಿಂದ ಪ್ರೇಮಿಗಳ ವಿವಾಹ ಗುರುವಾರ ಸುಖಾಂತ್ಯವಾಗಿದೆ.
ತಾಲ್ಲೂಕಿನ ಯಗವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐ.ಕುರುಪಲ್ಲಿ ಗ್ರಾಮದ ರಕ್ಷಿತಾ ಮತ್ತು ಪಕ್ಕದ ಗ್ರಾಮ ಕೊಂಡವೆನಕನಪಲ್ಲಿಯ ಯಶ್ವಂತ್ ಪ್ರೀತಿಸಿ ಪ್ರೇಮ ವಿವಾಹವಾಗಿದ್ದರು.
ರಕ್ಷಿತಾ ಕೋಲಾರ ತಾಲ್ಲೂಕಿನ ಜಂಬಾಪುರ ಗ್ರಾಮದ ತನ್ನ ಅಜ್ಜಿ ತಾತನ ಮನೆಯಲ್ಲಿ ವಾಸವಾಗಿದ್ದರು. ಪ್ರೀತಿಯ ಮಾಹಿತಿ ಪಡೆದ ರಕ್ಷಿತಾ ಸೋದರ ಮಾವಂದಿರು ಬೇರೆ ಹುಡುಗನೊಂದಿಗೆ ಮದುವೆಗೆ ಸಿದ್ಧತೆ ಮಾಡುತ್ತಿದ್ದರು ಎನ್ನಲಾಗಿದೆ.
ಕೂಡಲೇ ಮದುವೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣ ಕಳೆದುಕೊಳ್ಳುವುದಾಗಿ ರಕ್ಷತಾ ಯಶ್ವಂತ್ಗೆ ಮನವಿ ಮಾಡಿದ್ದಳು. 10 ದಿನದ ಹಿಂದೆ ಇಬ್ಬರೂ ದೇವಾಲಯವೊಂದರಲ್ಲಿ ವಿವಾಹವಾಗಿದ್ದರು. ಹುಡುಗಿಯ ಸೋದರ ಮಾವಂದಿರು ರಕ್ಷಿತಾ ಕಾಣೆಯಾಗಿರುವ ಬಗ್ಗೆ ಕೋಲಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದಂಪತಿ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿ, ನಾವು ಪ್ರೀತಿಸಿ ಮದುವೆಯಾಗಿದ್ದೇವೆ ಎಂದು ತಿಳಿಸಿದ್ದರು. ಹುಡುಗಿಯ ಸೋದರ ಮಾವಂದಿರು ಅಲ್ಲಿಗೂ ಬಂದು ಬೆದರಿಕೆ ಹಾಕಿದ್ದರು. ವಿಚಾರಣೆ ನಡೆಸಿದ ಪೊಲೀಸರು ಕಿರುಕುಳ ನೀಡಬಾರದು ಎಂದು ಎಚ್ಚರಿಸಿ ಕಳುಹಿಸಿದ್ದರು.
ಬುಧವಾರ ನಗರದ ಉಪನೊಂದಣಾಧಿಕಾರಿ ಕಚೇರಿಗೆ ದಂಪತಿ ವಿವಾಹ ನೋಂದಣಿಗೆ ಆಗಮಿಸಿದ್ದು ಸರ್ವರ್ ಸಮಸ್ಯೆಯಿಂದ ನೋಂದಣಿ ಆಗಿರಲಿಲ್ಲ. ಗುರುವಾರ ಮತ್ತೆ ನೋಂದಣಿಗೆ ಬರುತ್ತಾರೆ ಎಂದು ತಿಳಿದು ಸೋದರಮಾವಂದಿರು ಹಾಗೂ ಕೋಲಾರ ಇಬ್ಬರು ಪೊಲೀಸರು ಕಾರಿನಲ್ಲಿ ಆಗಮಿಸಿ ಯಶ್ವಂತ್ ತಂದೆ ಜಯಣ್ಣ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಜಯಣ್ಣನ ಸಂಬಂಧಿಕರು ಇದನ್ನು ಗಮನಿಸಿ ಹಿಂಬಾಲಿಸಿ ಕಾರನ್ನು ತಡೆದು ಸಾರ್ವಜನಿಕರ ಸಹಾಯದಿಂದ ಕಾರನ್ನು ನಗರ ಠಾಣೆಗೆ ಒಪ್ಪಿಸಿದ್ದಾರೆ.
ನಗರ ಠಾಣೆ ಪೊಲೀಸರು ಹುಡುಗಿಯ ಸೋದರ ಮಾವಂದಿರಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದರು. ದಂಪತಿ ಪೊಲೀಸ್ ಠಾಣೆ ಮುಂದೆ ಮತ್ತೊಮ್ಮೆ ಹಾರ ಬದಲಾಯಿಸಿಕೊಂಡು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಪ್ರೇಮವಿವಾಹ ಸುಖಾಂತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.