ADVERTISEMENT

ಕೋವಿಡ್‌ ಹೆಚ್ಚಳ: ರಂಗೇರಿದ್ದ ಕಸಾಪ ಚುನಾವಣೆಗೆ ತಣ್ಣೀರು

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 3:15 IST
Last Updated 27 ಏಪ್ರಿಲ್ 2021, 3:15 IST
ಕೈವಾರ ಶ್ರೀನಿವಾಸ್
ಕೈವಾರ ಶ್ರೀನಿವಾಸ್   

ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕಸಾಪ ಘಟಕಗಳಿಗೆ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರವಾದ ಕಾವೇರಿತ್ತು. ಹಾಲಿ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮತ್ತು ಶಿಕ್ಷಣ ತಜ್ಞ ಕೋಡಿ ರಂಗಪ್ಪ ಅವರ ನಡುವೆಯೇ ಪೈಪೋಟಿ ನಡೆದಿತ್ತು. ಈ ಇಬ್ಬರು ಸ್ಪರ್ಧಿಗಳು ಮತದಾರರನ್ನು ಭೇಟಿ ಮಾಡಿ ತಮ್ಮ ಪರ ಮತ ಚಲಾಯಿಸುವಂತೆ ಕೋರಿದ್ದರು.

ಅಲ್ಲದೆ ಕೋಡಿ ರಂಗಪ್ಪ ಅವರ ಪರವಾಗಿ ಸಮಾನ ಮನಸ್ಕರ ಗುಂ‍ಪು ಜಿಲ್ಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿತ್ತು. ಪತ್ರಿ ಮತದಾರರಿಗೂ ಪತ್ರ ಬರೆಯುವ ಮೂಲಕ ವ್ಯವಸ್ಥಿತವಾಗಿ ಮತವನ್ನು ಕೋರುತ್ತಿದ್ದರು. ಕೈವಾರ ಶ್ರೀನಿವಾಸ್ ಸಹ ತಮ್ಮದೇ ಆದ ಪಡೆಯ ಮೂಲ ಮತದಾರರ ಮನಗೆಲ್ಲಲು ಪ್ರಯತ್ನಿಸಿದ್ದರು.

ADVERTISEMENT

ಕೈವಾರ ಶ್ರೀನಿವಾಸ್ ಅವರಗಿಂತಲೂ ಮುಂಚೆಯೇ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿ ಪ್ರಚಾರ ಸಹ ನಡೆಸಿದ್ದರು. ತಾಲ್ಲೂಕುವಾರು ಸಂಘಟನೆಯನ್ನು ಆರಂಭಿಸಿದ್ದರು. ತಮ್ಮಆಪ್ತ ವಲಯ ಮತ್ತು ಸ್ನೇಹಿತರ ಒಪ್ಪಿಗೆ ಪಡೆದು ಕೈವಾರ ಶ್ರೀನಿವಾಸ್ ಸ್ಪರ್ಧೆಗೆ ಧುಮುಕ್ಕಿದ್ದರು. ಹೀಗೆ ಈ ಇಬ್ಬರ ನಡುವೆಯೇ ಸ್ಪರ್ಧೆ ಪ್ರಮುಖವಾಗಿತ್ತು.

‘ನಾವೂ ಕೂಡ ಸರ್ಕಾರ ಜತೆ ಕೈ ಜೋಡಿಸಿ ಜನರ ಹಿತಕ್ಕೆ ಕೆಲಸ ಮಾಡುತ್ತೇವೆ. ಚುನಾವಣೆಗಿಂತ ಜನರ ಆರೋಗ್ಯ ಮುಖ್ಯ. ಆದ್ದರಿಂದ ಸರ್ಕಾರದ ತೀರ್ಮಾನಕ್ಕೆ ಸಹಕಾರ ನೀಡುತ್ತೇವೆ. ನಾವೂ ಸಹ ಸ್ಥಳೀಯವಾಗಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಕೆಲಸ ಮಾಡುತ್ತೇವೆ’ ಎಂದು ಕೋಡಿ ರಂಗಪ್ಪ ತಿಳಿಸಿದರು.

‘ಚುನಾವಣೆಗಾಗಿ ನಾನು ಈಗಾಗಲೇ ಸಾಕಷ್ಟು ಮತದಾರರನ್ನು ಭೇಟಿ ಮಾಡಿದ್ದೇ. ಆಗಲೂ ಕೊರೊನಾ ಬಗ್ಗೆ ಎಚ್ಚರವಾಗಿರುವಂತೆ ಜಾಗೃತಿ ಮೂಡಿಸಿದ್ದೆ. ಕೋವಿಡ್ ಕಾರಣದಿಂದ ಕಸಾಪ ಸದಸ್ಯರ ಮನೆಗಳಿಗೆ ಹೋಗಲು ಅಂಜಿಕೆ ಆಗುತ್ತಿತ್ತು. ಚುನಾವಣೆ ಯಾವಾಗಲಾದರೂ ನಡೆಯಲಿ. ನಮ್ಮ ಸಾಹಿತ್ಯ ಸೇವೆ ಮುಂದುವರಿಸುತ್ತೇವೆ‘ ಎಂದು ಕೈವಾರ ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.