ಗೌರಿಬಿದನೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಹಣದ ಆಸೆಗೆ ಗಿಡ, ಮರಗಳನ್ನು ಕಡಿದು ಮಾರಾಟ ಮಾಡುತ್ತಿರುವುದು ಅಕ್ಷ್ಮಮ್ಯ ಅಪರಾಧವಾಗಿದ್ದು, ಪರಿಸರ ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಮುಂದಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಧೀಶೆ ರೇಣುಕಾ ದೇವಿದಾಸ್ ರಾಯ್ಕರ್ ತಿಳಿಸಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲ ಸಂಘ, ತಾಲ್ಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಪರಿಸರ ಸಂರಕ್ಷಣೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಮಾತನಾಡಿ, ಕಳೆದ ಎರಡು ದಶಕಗಳಿಂದ ಮಾನವ ಪರಿಸರ ನಾಶ ಮಾಡಿದ ಪರಿಣಾಮ ಸಕಾಲಕ್ಕೆ ಮಳೆಯ ಕೊರತೆಯಾಗಿದೆ. ನೀರಿನ ಅಭಾವ ಉಂಟಾಗಿದೆ. ಮನುಷ್ಯನಿಗೆ ಆರೋಗ್ಯ ಮತ್ತು ಆಹಾರದೊಂದಿಗೆ ಉತ್ತಮ ಪರಿಸರ ಅವಶ್ಯಕವಾಗಿದೆ. ಪರಿಸರ ನಾಶದಿಂದ ವಿಚಿತ್ರ ಕಾಯಿಲೆಗಳು ಬಂದಿವೆ. ಕೊರೊನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಪರಿಸರ ಉಳಿಸಲು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಗಂಗಯ್ಯ, ವಕೀಲರಾದ ವಿಜಯ್ ಕುಮಾರ್, ಜಗದೀಶ್, ಚಂದ್ರಶೇಖರ್, ನಾಗರಾಜು, ನರಸಿಂಹಮೂರ್ತಿ, ವಿ. ಗೋಪಾಲ್, ಕೋರ್ಟ್ ಸಿಬ್ಬಂದಿಯಾದ ನಾಗರಾಜು, ಸಂಧ್ಯಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.