ಶಿಡ್ಲಘಟ್ಟ: ನಗರದ ಔಷಧಿ ಅಂಗಡಿಗಳ ಮಾಲೀಕರು ಪುರಸಭೆ ಅಧಿಕಾರಿಗಳಿಂದ ಪರವಾನಗಿ ಪಡೆಯಲು ಒತ್ತಾಯಿಸುವುದನ್ನು ವಿರೋಧಿಸಿ ಔಷಧಿ ಮಾರಾಟಗಾರರು ಮಂಗಳವಾರ ಪ್ರತಿಭಟನೆ ನಡೆಸಿದರು. ಜತೆಗೆ ಈ ಕುರಿತು ಸಂಘವು ನಗರಸಭೆ ಪೌರಾಯುಕ್ತ ಶ್ರೀಕಾಂತ್ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರಮೇಶ್ ಬಾಬು ಮಾತನಾಡಿ, ‘ರಾಜ್ಯವ್ಯಾಪಾರ ಔಷಧಿ ಸಂಘದ ಆದೇಶದಂತೆ ಔಷಧಿ ಅಂಗಡಿಗಳವರು
ಯಾವುದೇ ಸ್ಥಳೀಯ ಲೈಸನ್ಸ್ (ಪರವಾನಿಗೆ)ಪಡೆಯುವ ಅಗತ್ಯವಿಲ್ಲವೆಂಬ ನ್ಯಾಯಾಲಯದ ಆದೇಶವಿದೆ.ಆದರೆ, ಪುರಸಭೆ ಅಧಿಕಾರಿಗಳು ಆಗಾಗ್ಗೆ ಔಷಧಿ ಅಂಗಡಿಗಳಿಗೆ ಭೇಟಿ ಕೊಟ್ಟು ಸ್ಥಳೀಯ ಲೈಸನ್ಸ್ (ಪರವಾನಿಗೆ) ಪಡೆಯಲು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯಿಂದ ಔಷಧಿ ಅಂಗಡಿಗಳಿಗೆ ಪರವಾನಗಿ ಪಡೆಯಲಾಗಿದೆ. ಅದೇ ರೀತಿ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಿಸುತ್ತಿದ್ದೇವೆ ಎಂದರು.
ಮನವಿ ಸ್ವೀಕರಿಸಿದ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ‘ನಮಗೆ ಈ ರೀತಿಯ ಆದೇಶ ಬಂದಿಲ್ಲ. ಮೇಲಾಧಿಕಾರಿಗಳ ಗಮಕ್ಕೆ ತಂದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು. ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಎಸ್.ವಿ. ಗುಪ್ತ, ಎಸ್.ಎಲ್.ಎನ್. ಚಂದ್ರಶೇಖರ್, ಪಿ.ಎಸ್. ಮಂಜುನಾಥ್, ಎಲ್. ಸುರೇಶ್, ಅಂಜನಿ ಮೋಹನ್, ಬಾಬು, ಅಸದ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.