ADVERTISEMENT

ಬಾಗೇಪಲ್ಲಿ: ಮನೆಗಳಿಗೆ ನುಗ್ಗಿದ ಮಳೆ ನೀರು

ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ನಾಗರಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 3:44 IST
Last Updated 22 ಅಕ್ಟೋಬರ್ 2021, 3:44 IST
ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡ್‍ನ ಸಂಯಮ ಶಾಲೆ ಹಿಂಭಾಗದಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿರುವುದು
ಬಾಗೇಪಲ್ಲಿ ಪಟ್ಟಣದ 7ನೇ ವಾರ್ಡ್‍ನ ಸಂಯಮ ಶಾಲೆ ಹಿಂಭಾಗದಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿರುವುದು   

ಬಾಗೇಪಲ್ಲಿ: ಪಟ್ಟಣದ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಭಾರಿ ಮಳೆ ಸುರಿದ ಪರಿಣಾಮ ರಾಜ(ಯರ್ರ) ಕಾಲುವೆ, ಚರಂಡಿಗಳಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗಿತು. ರಸ್ತೆಗಳು ಹಾಗೂ ತಗ್ಗಿನ ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ
ಅಸ್ತವ್ಯಸ್ತವಾಗಿದೆ.

ಕೊಂಡಂವಾರಿಪಲ್ಲಿ ಕೆರೆ, ಮಿನಿ ಕ್ರೀಡಾಂಗಣದಿಂದ ಡಾ.ಎಚ್.ಎನ್. ವೃತ್ತ, ಯಂಗ್ ಇಂಡಿಯಾ, ಸಂಯಮ ಶಾಲೆಯ ಹಿಂದೆ, ಸಂತೆ ಮೈದಾನ, ಬೆಸ್ಕಾಂ ಹಿಂಭಾಗದ ಮೂಲಕ ಕೊರ್ಲಕುಂಟೆವರೆಗೆ ರಾಜಕಾಲುವೆ ಇದೆ. ಹಿಂದೆ 33 ಅಡಿಯಿದ್ದ ಕಾಲುವೆ ಇದೀಗ ಕೇವಲ 3 ಅಡಿಯಷ್ಟು ಉಳಿದುಕೊಂಡಿದೆ.

ಕೆಲವು ಪ್ರಭಾವಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಪಟ್ಟಣದ ಜನರು ಕಲುಷಿತ ತ್ಯಾಜ್ಯ, ಕಸಕಡ್ಡಿ, ಪ್ಲಾಸ್ಟಿಕ್ ಹಾಕಿರುವುದರಿಂದ ರಾಜಕಾಲುವೆಗಳು ಚರಂಡಿಯಂತಾಗಿವೆ. ಕಾಲುವೆ ನಿರ್ಮಾಣಕ್ಕೆ ಪುರಸಭೆಯಿಂದ ಕೋಟ್ಯಂತರ ಹಣ ವ್ಯಯ ಮಾಡಲಾಗಿದೆ. ಆದರೆ ರಾಜಕಾಲುವೆಯಲ್ಲಿ ಕಸ–ಕಡ್ಡಿ, ತ್ಯಾಜ್ಯ ವಿಲೇವಾರಿ ಮಾಡದಿರುವುದರಿಂದ ಅಕ್ಕಪಕ್ಕದ ಮನೆ ಹಾಗೂ ಹೊಲ-ಗದ್ದೆಗಳಿಗೆ ಮಳೆ, ಚರಂಡಿ ನೀರು ನುಗ್ಗಿದೆ. ಮನೆಯಿಂದ ನೀರನ್ನು ಹೊರಹಾಕಲು ಜನರು ಪ್ರಯಾಸಪಟ್ಟರು.

ADVERTISEMENT

ಮಳೆ ರಭಸವಾಗಿ ಬಿದ್ದಿದ್ದರಿಂದ ಪಟ್ಟಣದ ರಸ್ತೆಗಳು, ತಗ್ಗಿನ ಪ್ರದೇಶಗಳು ಜಲಾವೃತಗೊಂಡಿವೆ. ಪಟ್ಟಣದ ಡಾ.ಎಚ್.ಎನ್. ವೃತ್ತದಲ್ಲಿ ಮಳೆ ಹಾಗೂ ಚರಂಡಿ ಸಂಗ್ರಹವಾಗಿದೆ. ಪೊಲೀಸ್ ವಸತಿಗೃಹಗಳಿಗೂ ನೀರು ನುಗ್ಗಿದೆ. ಮನೆಗಳಿಗೆ ಹೋಗಲು ಜನರಿಗೆ ತೊಂದರೆಯಾಗಿದೆ.

‘ರಾಜಕಾಲುವೆಯ ಸ್ವಚ್ಛತೆಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡಿದರೂ ಸ್ವಚ್ಛತೆ ಮಾಡಿಲ್ಲ. ಇದೀಗ ಮಳೆ, ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ಪಟ್ಟಣದ 7ನೇ ವಾರ್ಡ್‌ ನಿವಾಸಿ ಜಿಯಾವುಲ್ಲಾ
ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.