ಶಿಡ್ಲಘಟ್ಟ: ತಾಲ್ಲೂಕಿನ ಎಸ್. ದೇವಗಾನಹಳ್ಳಿಯ ರಾಮಸಮುದ್ರ ಕೆರೆಯು ಶನಿವಾರ ಕೋಡಿ ಹರಿದಿದೆ.
ತಾಲ್ಲೂಕಿನಲ್ಲಿ ಅತಿದೊಡ್ಡದಾದ ಕೆರೆ ಹಾಗೂ ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ ಇದಾಗಿದೆ. ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರದ ಗಡಿಯ ಅಚ್ಚುಕಟ್ಟು ಪ್ರದೇಶವನ್ನು ಹಂಚಿಕೊಂಡಿದೆ.
ತಾಲ್ಲೂಕಿನ ಉತ್ತರ ಭಾಗದಲ್ಲಿ ಬೆಟ್ಟ, ಗುಡ್ಡಗಳ ಸಾಲಿನ ನಡುವೆ ಸಾಕಷ್ಟು ಕೆರೆಗಳಿದ್ದು, ಅವುಗಳ ಪೈಕಿ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಹಾಗೂ ಎಸ್. ದೇವಗಾನಹಳ್ಳಿಯ ರಾಮಸಮುದ್ರ ಕೆರೆ ಹೊರತುಪಡಿಸಿ ಮಿಕ್ಕೆಲ್ಲವೂ ಸಣ್ಣಪುಟ್ಟ ಕೆರೆಗಳಾಗಿವೆ.
ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಬಿದ್ದ ಮಳೆಗೆ ಸಾಕಷ್ಟು ಸಣ್ಣಪುಟ್ಟ ಕೆರೆಗಳು ಕೋಡಿ ಹರಿದಿದ್ದವಾದರೂ ದೊಡ್ಡ ಕೆರೆಗಳ ಪೈಕಿ ಒಂದಾದ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಮೊನ್ನೆ ಕೋಡಿ ಹರಿದಿದ್ದು, ರಾಮಸಮುದ್ರ ಕೆರೆ ಶನಿವಾರ ಕೋಡಿ ಹರಿದಿದೆ.
ಮೈಸೂರು ಸಂಸ್ಥಾನದ ಜಯಚಾಮರಾಜ್ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ನಿರ್ಮಿಸಿದ್ದ ರಾಮಸಮುದ್ರ ಕೆರೆಯು ಸುಮಾರು 900 ಎಕರೆಯಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿದೆ.
ಈ ಕೆರೆ ಸುತ್ತಮುತ್ತಲಿನ ಏಳೂರಿನ ಗ್ರಾಮಸ್ಥರಿಗೆ ಜೀವನಾಡಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.