ADVERTISEMENT

ಶಿಡ್ಲಘಟ್ಟ | ನೀರಿನ ದಾಹ ನೀಗಲು ರಾಮಸಮುದ್ರ ಯೋಜನೆ

ಡಿ.ಜಿ.ಮಲ್ಲಿಕಾರ್ಜುನ
Published 8 ಡಿಸೆಂಬರ್ 2025, 4:50 IST
Last Updated 8 ಡಿಸೆಂಬರ್ 2025, 4:50 IST
ರಾಮಸಮುದ್ರ ಕೆರೆ
ರಾಮಸಮುದ್ರ ಕೆರೆ   

ಶಿಡ್ಲಘಟ್ಟ: ‘ನಮ್ಮ ಮನೆಗೆ ಕುಡಿಯುವ ನೀರು ಬಂದು ಒಂದು ವರ್ಷದ ಮೇಲಾಗಿದೆ. ಮೂರು ತಿಂಗಳ ಹಿಂದೆ ನಡೆದ ಚರಂಡಿ ಕಾಮಗಾರಿಯಿಂದ ಉಪ್ಪು ನೀರು ಹರಿಸುವ ಪೈಪ್‌ಲೈನ್ ಹಾಳಾಗಿದೆ. ಉಪ್ಪು ನೀರೂ ಬರುತ್ತಿಲ್ಲ. ಮನೆಗೆ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದೇವೆ’– ಇದು ಶಿಡ್ಲಘಟ್ಟದ 15ನೇ ವಾರ್ಡ್ ನಿವಾಸಿ ಷೇಕ್ ಹುಸೇನ್ ನುಡಿ.

ಷೇಕ್ ಹುಸೇನ್ ಮಾತು ಶಿಡ್ಲಘಟ್ಟ ನಗರದ ನೀರು ಸರಬರಾಜಿನ ಅವ್ಯವಸ್ಥೆ, ನೀರಿನ ಕೊರತೆ, ಸಮಸ್ಯೆಯ ಅಗಾಧತೆಯನ್ನು ಪ್ರತಿಧ್ವನಿಸುತ್ತದೆ. ಈಗ ಈ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ ರಾಮಸಮುದ್ರದಿಂದ ಶಿಡ್ಲಘಟ್ಟಕ್ಕೆ ನೀರು ತರುವ ಯೋಜನೆಗೆ ನಿಶಾನೆ ದೊರೆತಿದೆ. 

ಈ ಯೋಜನೆಯ ಬಗ್ಗೆ ಶಿಡ್ಲಘಟ್ಟ ನಾಗರಿಕರು ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಗರದ ನೀರಿನ ದಾಹ ನೀಗುತ್ತದೆ ಎನ್ನುವ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ. 

ADVERTISEMENT

ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರ ಮತ್ತು ಈ ಮಾರ್ಗದ 13 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ. ₹ 96 ಕೋಟಿ ವೆಚ್ಚದ ಯೋಜನೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಎರಡು ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 

ಈ ಮೂಲಕ ವೇಗವಾಗಿ ಬೆಳೆಯುತ್ತಿರುವ ಶಿಡ್ಲಘಟ್ಟ ನಗರಕ್ಕೆ ಭವಿಷ್ಯದಲ್ಲಿಯೂ ರಾಮಸಮುದ್ರದ ಕೆರೆ ನೀರು ಆಸರೆ ಆಗುತ್ತದೆ.

55 ಎಲ್‌ಪಿಸಿಡಿ ನೀರು: ಪ್ರಸ್ತುತ ಕೊಳವೆಬಾವಿಗಳಿಂದ ಮಾತ್ರ ನಗರದ ಜನರಿಗೆ ನೀರು ಪೂರೈಸಲಾಗುತ್ತಿದೆ. ಪ್ರತಿ ದಿನ 55 ಎಲ್‌ಪಿಸಿಡಿ ನೀರು ಸರಬರಾಜು ಮಾಡಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 127 ಕೊಳವೆ ಬಾವಿಗಳಿವೆ. ಅವುಗಳಲ್ಲಿ 96 ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿದೆ. ನಗರಸಭೆಯ 31 ವಾರ್ಡುಗಳಲ್ಲಿನ 12,850 ಮನೆಗಳಿಗೆ ಸುಮಾರು 15 ರಿಂದ 20 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸಲು ಇದೀಗ ಬೃಹತ್ ಯೋಜನೆ ಪ್ರಾರಂಭವಾಗುತ್ತಿದೆ.

ಯೋಜನೆಯ ವಿವರ: ರಾಮಸಮುದ್ರ ಕೆರೆಯಲ್ಲಿ 10 x 12 ಮೀ ಹೌಸಿಂಗ್ ಚೇಂಬರ್ ನಿರ್ಮಿಸಿ ಅಲ್ಲಿಂದ ನೀರು ಪಂಪ್ ಮಾಡಲಾಗುತ್ತದೆ. ಅಜ್ಜಕದಿರೇನಹಳ್ಳಿಯ ಬಳಿ 10 ಎಂಎಲ್‌ಡಿ ಜಲಶುದ್ಧೀಕರಣ ಘಟಕ ಸ್ಥಾಪಿಸಿ ನೀರು ಶುದ್ಧೀಕರಿಸಲಾಗುತ್ತದೆ. ರಾಮಸಮುದ್ರ ಕೆರೆಯಿಂದ ಜಲ ಶುದ್ಧೀಕರಣ ಘಟಕಕ್ಕೆ ಕಚ್ಚಾ ನೀರು ಏರು ಕೊಳವೆ ಅಳವಡಿಸಲಾಗುತ್ತದೆ.

ನಗರದಲ್ಲಿ ಈಗಾಗಲೇ ಇರುವ ಐದು ಜಲಸಂಗ್ರಹಾಗಾರಗಳ ಜೊತೆಗೆ ಹೊಸದಾಗಿ 15 ಲಕ್ಷ ಲೀಟರ್ ಸಾಮರ್ಥ್ಯದ ಒಂದು, 10 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಜಲಸಂಗ್ರಹಗಾರಗಳನ್ನು ನಿರ್ಮಿಸಲಾಗುವುದು.

ಜಲ ಶುದ್ಧೀಕರಣ ಘಟಕದಿಂದ ನಗರದ ಜಲಸಂಗ್ರಹಗಾರಗಳವರೆಗೆ 14.88 ಕಿ.ಮೀ. ದೂರ ವಿವಿಧ ವ್ಯಾಸದ ಡಿ.ಐ ಫೀಡರ ಕೊಳವೆಗಳನ್ನು ಅಳವಡಿಸಳಾಗುತ್ತದೆ. ನಗರದಾದ್ಯಂತ ನೀರು ಸರಬರಾಜಿಗೆ 99.18 ಕಿ.ಮೀ ವಿವಿದ ವ್ಯಾಸದ ಎಚ್.ಡಿ.ಪಿ.ಇ, ಡಿ.ಐ. ವಿತರಣಾ ಜಾಲ ಅಳವಡಿಸುವರು. ನಗರದ ಐದು ಜಲಸಂಗ್ರಹಾಗಾರಗಳನ್ನು ನವೀಕರಣಗೊಳಿಸಲಾಗುತ್ತದೆ. ಇವುಗಳನ್ನೆಲ್ಲಾ ನಿರ್ವಹಣೆ ಮಾಡಲು ಆಧುನಿಕ ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಲಾಗುತ್ತದೆ.

ಶಿಡ್ಲಘಟ್ಟ ನಗರದಲ್ಲಿ 2011ನೇ ಜನಗಣತಿ ಪ್ರಕಾರ 51,159 ಜನಸಂಖ್ಯೆ ಇದೆ. 2025ಕ್ಕೆ 66,300 ಜನರು ವಾಸಿಸುತ್ತಿದ್ದಾರೆ. ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ದಿನಂಪ್ರತಿ ನಗರದ ನೀರಿನ ಬೇಡಿಕೆಯು 11.20 ಎಂಎಲ್‌ಡಿ ಆಗಿದೆ. ನಗರದ ಜನಸಂಖ್ಯೆಯು 2040ನೇ ಸಾಲಿಗೆ 86,700 ಮತ್ತು 2055 ನೇ ಸಾಲಿಗೆ 1,12,500 ಆಗುತ್ತದೆ ಎಂದು ಅಂದಾಜಿಸಲಾಗಿದೆ.

ಶಾಸಕ ಬಿ.ಎನ್.ರವಿಕುಮಾರ್
40 ವರ್ಷಗಳ ದೂರಗಾಮಿ ಯೋಜನೆ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಅಗಾಧವಾಗಿದೆ. ಫ್ಲೋರೈಡ್ ಕ್ಯಾಲ್ಸಿಯಂ ಸಮಸ್ಯೆ ಜನರನ್ನು ಬಾಧಿಸುತ್ತಿದೆ. ನಗರ ಬೆಳೆಯುತ್ತಿದೆ. ನೀರಿನ ಕೊರತೆ ಇದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮೂಲಕ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವ  ಹರ್ದೀಪ್ ಸಿಂಗ್ ಪುರಿ ಅವರಿಗೆ ‘ಅಮೃತ್ 2’ ಯೋಜನೆಯಡಿ ಶಿಡ್ಲಘಟ್ಟದ ಕುಡಿಯುವ ನೀರಿನ ಯೋಜನೆ ಸೇರಿಸುವಂತೆ ವಿನಂತಿಸಿದ್ದೆವು. ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕೂಡ ಸ್ಪಂದಿಸಿದರು. ಈ ಯೋಜನೆಗೆ ನೆರವಾದರು ಎಂದು ಹೇಳಿದರು. ರಾಮಸಮುದ್ರ ಕೆರೆಯಿಂದ ಈ ಯೋಜನೆಗೆ ಬಳಸಿಕೊಳ್ಳುವುದು 3.5 ಎಂಎಲ್‌ಡಿ ಮಾತ್ರ. ಉಳಿಕೆ 6.5 ಎಂಎಲ್‌ಡಿಯಷ್ಟು ನೀರು ಕೆರೆಯಲ್ಲೇ ಇರುತ್ತದೆ. ತಾಲ್ಲೂಕಿನ 13 ಹಳ್ಳಿಗಳು ಮತ್ತು ನಗರದ ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ನೀರು ನಿರಂತರವಾಗಿ ಸಿಗಲಿದೆ ಎಂದರು. ರೇಷ್ಮೆ ಉದ್ಯಮಕ್ಕೂ ನೀರು ಬೇಕು ನಗರ ದಿನೇದಿನೇ ಬೆಳೆಯುತ್ತಿದೆ. ನಗರದಲ್ಲಿ ಜನರಿಗಲ್ಲದೆ ರೇಷ್ಮೆ ಉದ್ಯಮಕ್ಕೂ ನೀರು ಬೇಕಿದೆ. ನೀರಿಗೆ ಕೊಳವೆಬಾವಿಗಳನ್ನಷ್ಟೇ ನಾವು ನಂಬಿರುವುದರಿಂದ ಸಾಕಷ್ಟು ಸಮಸ್ಯೆಗಳಿವೆ. ರಾಮಸಮುದ್ರ ಕೆರೆಯಿಂದ ನೀರು ಬಂದರೆ ನಮ್ಮ ನಗರಕ್ಕೆ ಬಹಳ ಉಪಯೋಗ ಮತ್ತು ಉಪಕಾರವಾಗಲಿದೆ ಎನ್ನುತ್ತಾರೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತ.
ಜಿಲ್ಲೆಯ ಎರಡನೇ ದೊಡ್ಡ ಕೆರೆ
ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರದ ಗಡಿಯ ಅಚ್ಚುಕಟ್ಟು ಪ್ರದೇಶ ಹಂಚಿಕೊಂಡಿರುವ ರಾಮಸಮುದ್ರ ಕೆರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅತಿ ದೊಡ್ಡದಾದ ಕೆರೆ. ಜಿಲ್ಲೆಯಲ್ಲಿಯೇ ಎರಡನೇ ಅತಿದೊಡ್ಡ ಕೆರೆ ಎಂಬ ಖ್ಯಾತಿ ಪಡೆದಿದೆ. ತಾಲ್ಲೂಕಿನ ಉತ್ತರ ಭಾಗವು ಬೆಟ್ಟಗುಡ್ಡಗಳ ಸಾಲಿನಿಂದ ಕೂಡಿದ್ದು ಸಣ್ಣಪುಟ್ಟ ಕೆರೆಗಳ ಸರಪಳಿಯಾಗಿದೆ. ಅವುಗಳ ಪೈಕಿ ಪ್ರಮುಖವಾದ ತಲಕಾಯಲಬೆಟ್ಟದ ವೆಂಕಟೇಶ್ವರಸಾಗರ ಮತ್ತು ಎಸ್.ದೇವಗಾನಹಳ್ಳಿಯ ರಾಮಸಮುದ್ರ ಕೆರೆಗಳು ಮಾತ್ರ ದೊಡ್ಡ ಪ್ರಮಾಣದ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. 130 ವರ್ಷಗಳ ಹಿಂದೆ ನಿರ್ಮಿಸಿದ್ದ ರಾಮಸಮುದ್ರ ಕೆರೆಯು 900 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. 800 ಎಕರೆಯಷ್ಟು ಅಚ್ಚುಕಟ್ಟು ಶಿಡ್ಲಘಟ್ಟ ತಾಲ್ಲೂಕಿನಲ್ಲಿದ್ದರೆ ಉಳಿದ 100 ಎಕರೆಯಷ್ಟು ಅಚ್ಚುಕಟ್ಟು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ. ಈ ಕೆರೆ ಸುತ್ತ ಮುತ್ತಲ ಏಳೂರಿನ ಗ್ರಾಮಸ್ಥರಿಗೆ ಜೀವನಾಡಿಯಾಗಿದೆ.
ಕೇಂದ್ರ ರಾಜ್ಯದ ಅನುದಾನ
₹ 96 ಕೋಟಿ ಯೋಜನೆಯ ವೆಚ್ಚವಾಗಿದೆ. ಈ ಪೈಕಿ ಕೇಂದ್ರ ಸರ್ಕಾರ ಶೇ 50 (₹ 42.88 ಕೋಟಿ) ರಾಜ್ಯ ಸರ್ಕಾರ ಶೇ 40 (₹34.30 ಕೋಟಿ) ನಗರಸಭೆ ಶೇ 10 (₹18.8 ಕೋಟಿ) ಭರಿಸಲಿವೆ. ನಗರದ ಜೊತೆಗೆ ತಾಲ್ಲೂಕಿನ ಯರ್ರಗಾನಹಳ್ಳಿ ಗಡಿಮಿಂಚೇನಹಳ್ಳಿ ಅಮ್ಮಗಾರಹಳ್ಳಿ ಬಶೆಟ್ಟಹಳ್ಳಿ ಅಜ್ಜಕದಿರೇನಹಳ್ಳಿ ಗಿರಿಮಿರಲಹಳ್ಳಿ ಕೋಟಹಳ್ಳಿ ಜಯಂತಿಗ್ರಾಮ ಮಲ್ಲಹಳ್ಳಿ ಅಬ್ಲೂಡು ಚೀಮನಹಳ್ಳಿ ವರದನಾಯಕನಹಳ್ಳಿ ಹನುಮಂತಪುರ ಗ್ರಾಮಗಳಿಗೂ ನೀರಿನ ಸೌಲಭ್ಯ ಸಿಗಲಿದೆ. ಶಿಡ್ಲಘಟ್ಟ ನಗರ ಮತ್ತು ಮಾರ್ಗ ಮಧ್ಯದ 13 ಹಳ್ಳಿಗಳಿಗೆ ಕುಡಿಯುವ ನೀರಿನ ಬೇಡಿಕೆ 2025ಕ್ಕೆ 84 ಎಂ.ಸಿ.ಎಫ್.ಟಿ ಗಳಿದ್ದರೆ ರಾಮಸಮುದ್ರ ಕೆರೆಯ ನೀರಿನ ಶೇಖರಣಾ ಸಾಮರ್ಥ್ಯ 280.18 ಎಂ.ಸಿ.ಎಫ್.ಟಿ ಆಗಿದೆ. ರಾಮಸಮುದ್ರ ಕೆರೆ ಅಂಗಳದ ವಿಸ್ತೀರ್ಣ 470 ಎಕರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.