ಚಿಕ್ಕಬಳ್ಳಾಪುರ: ‘ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಸಾಯುವಾಗ ನನ್ನ ಹೆಸರು ಉಳಿಸುವವರು ಯಾರು ಇಲ್ಲವಲ್ಲ ಎಂದು ಕೊರಗಿದಾಗ, ಇವರು (ಬಿಜೆಪಿಯವರು) ನಿಮ್ಮ ಹೆಸರು ಉಳಿಸುತ್ತೇವೆ ಎಂದಿದ್ದರಂತೆ. ಹೀಗಾಗಿ, ಈಗ ಹಿಟ್ಲರ್ ಹೆಸರು ಸಾರ್ಥಕತೆ ಮಾಡಲು ಆ ದಿಕ್ಕಿನಲ್ಲಿ ಹೊರಟಿದ್ದಾರೆ’ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಟೀಕಿಸಿದರು.
ನಗರದಲ್ಲಿ ಮಂಗಳವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎನ್ಎನ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮಾಯಕರ ಪ್ರಾಣ ತೆಗೆಯುವ ಅಗತ್ಯವಿತ್ತಾ? ಜನರು ಬೀದಿಗೆ ಬಂದಿದ್ದರಾ? ಯಾರು ಜನರನ್ನು ಬೀದಿಗೆ ಬರುವಂತೆ ಯಾರು ಮಾಡಿದರು? ಇಂತಹ ತಿದ್ದುಪಡಿ ಮಾಡದಿದ್ದರೆ ದೇಶಕ್ಕೆ ಅನಾಹುತ ಕಾದಿತ್ತಾ? ಅನಗತ್ಯವಾಗಿ ಇಂತಹ ವಿಚಾರಗಳನ್ನು ತೆಗೆದುಕೊಂಡು, ಜನರಿಗೆ ಉತ್ತರ ಕೊಡಲು ಆಗದೆ ಕೊನೆಗೆ ಅವರ ಮೇಲೆಯೇ ಆಪಾದನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಇದು ದೇಶ ನಡೆಸುವ ವಿಧಾನವೆ? ಇವತ್ತು ಲಕ್ಷಗಟ್ಟಲೇ ಜನರು ಉದ್ಯೋಗ ಕಳೆದುಕೊಂಡಿದ್ದಾರೆ? ಇವರು ವಿದೇಶದಿಂದ ಈವರೆಗೆ ನಯಾಪೈಸೆ ವಾಪಸ್ ತಂದರಾ? ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹವುಗಳನ್ನು ಹುಡುಕುತ್ತಿದ್ದಾರೆ. ರಾಜ್ಯದಲ್ಲಿ ಅದಕ್ಕೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಇವತ್ತು ಜನರನ್ನು ಪ್ರಚೋದಿಸುತ್ತಿರುವವರು ಕಾಂಗ್ರೆಸ್ನವರಲ್ಲ, ಬಿಜೆಪಿಯವರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.