ADVERTISEMENT

ಆರ್‌ಸಿಇಪಿ: ಮೋದಿ ನಿರ್ಧಾರ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 14:44 IST
Last Updated 5 ನವೆಂಬರ್ 2019, 14:44 IST

ಚಿಕ್ಕಬಳ್ಳಾಪುರ: ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ’ದ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ತಿರಸ್ಕರಿಸುವ ಮೂಲಕ ದೇಶದ ಕೃಷಿ ವಲಯ ಮತ್ತು ಹೈನುಗಾರರ ಹಿತ ಕಾಯಲು ಮುಂದಾಗಿರುವುದು ಶ್ಲಾಘನೀಯ’ ಎಂದು ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಕೋಚಿಮುಲ್) ನಿರ್ದೇಶಕ ಎನ್.ಸಿ.ವೆಂಕಟೇಶ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರಕಾರ ಸಹಿ ಹಾಕಿದ್ದರೆ ದೇಶದ ೧೦ ಕೋಟಿಗೂ ಅಧಿಕ ರೈತ ಕುಟುಂಬಗಳು ಬೀದಿಗೆ ಬರುತ್ತಿದ್ದವು. ಇದನ್ನು ಅರಿತು ಮೋದಿ ಅವರು ಬ್ಯಾಂಕಾಕ್‌ನಲ್ಲಿ ಸೋಮವಾರ ನಡೆದ ಆರ್‌ಸಿಇಪಿ ಶೃಂಗಸಭೆಯಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ತಾಲೂಕಿನಲ್ಲಿ 195 ಹಾಲು ಉತ್ಪಾದಕ ಸಂಘಗಳಿವೆ. ಅವುಗಳಲ್ಲಿ 9,128 ಸದಸ್ಯರಿದ್ದಾರೆ. ದಿನಕ್ಕೆ 1.01 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದಿನಕ್ಕೆ ಸರಾಸರಿ ₹23.42 ಲಕ್ಷದಂತೆ ತಿಂಗಳಿಗೆ ₹70.27 ಲಕ್ಷದ ವಹಿವಾಟು ನಡೆಯುತ್ತಿದೆ’ ಎಂದರು.

ADVERTISEMENT

ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣರೆಡ್ಡಿ, ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಪಾಪೇಗೌಡ, ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರಾದ ಬಿ.ಎನ್.ಮುನಿಕೃಷ್ಣಪ್ಪ, ಚಿಕ್ಕಗೆರಿಗರೆಡ್ಡಿ, ಎ.ವೆಂಕಟರೆಡ್ಡಿ, ರಾಮಚಂದ್ರಪ್ಪ, ಮುಖ್ಯ ಕಾರ್ಯನಿರ್ವಾಹಕರಾದ ಗಿಡ್ನಹಳ್ಳಿ ಜಿ.ಬಿ.ನಾರಾಯಣಸ್ವಾಮಿ, ದೊಡ್ಡೆಗೌಡ, ಒಕ್ಕೂಟದ ವಿಸ್ತರಣಾಕಾರಿಗಳಾದ ರಮೇಶ್ ಬಾಬು, ಸದಾಶಿವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.