ADVERTISEMENT

ಧರ್ಮ ಜಾಗೃತಿ ಇಂದಿನ ಅಗತ್ಯ: ಕಲ್ಲಡ್ಕ ಪ್ರಭಾಕರ ಭಟ್ ಅಭಿಮತ

ಸೀತಾರಾಮ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 15:22 IST
Last Updated 19 ಜನವರಿ 2020, 15:22 IST
ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಸೀತಾರಾಮ ಕಲ್ಯಾಣೋತ್ಸವ ಅದ್ಧೂರಿಯಾಗಿ ನೆರವೇರಿತು.
ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಸೀತಾರಾಮ ಕಲ್ಯಾಣೋತ್ಸವ ಅದ್ಧೂರಿಯಾಗಿ ನೆರವೇರಿತು.   

ಚಿಕ್ಕಬಳ್ಳಾಪುರ: ‘ಹಿಂದೂ ಧರ್ಮ ಸಂಕುಚಿತ, ಅದು ದೇಶವನ್ನು ತುಂಡರಿಸುತ್ತದೆ ಎಂದು ಮಕ್ಕಳಿಗೆ ಬಾಲ್ಯದಿಂದಲೇ ಹೇಳುತ್ತ ಬರುತ್ತಿರುವುದರಿಂದ ಈಗ ಅನೇಕ ಸಮಸ್ಯೆಗಳನ್ನು ನೋಡಬೇಕಾಗಿ ಬಂದಿದೆ. ನಾವು ಹಿಂದೂ ಎಂದು ಹೇಳುವುದೇ ಹೆಮ್ಮೆ, ಅಭಿಮಾನದ ವಿಷಯ. ಇನ್ನಾದರೂ ಮಕ್ಕಳಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಭಾನುವಾರ ಗಾಯತ್ರಿ ಸೇವಾ ಸಮಿತಿ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಸೀತಾರಾಮ ಕಲ್ಯಾಣೋತ್ಸವದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಬಹು ಹಿಂದಿನಿಂದಲೂ ಎಲ್ಲ ಧರ್ಮಿಯರಿಗೆ ನಾವು ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಆದ್ದರಿಂದ ನಮ್ಮದು ಸಂಕುಚಿತವಲ್ಲ, ಜಗತ್ತಿನ ಏಕಮೇವ ವಿಶಾಲ ಸಮಾಜ, ಧರ್ಮ, ಸಂಸ್ಕೃತಿ. ಅದರ ತಿಳುವಳಿಕೆ ಮತ್ತಷ್ಟು ಜನರಿಗೆ ಮೂಡಿಸುವ ಕೆಲಸವಾಗಬೇಕಿದೆ. ಇವತ್ತು ನಮ್ಮ ಸಂಸ್ಕೃತಿಯ ಮೇಲೆ ಪಾಶ್ಚಾತ್ಯ ಸಂಸ್ಕೃತಿ ದೊಡ್ಡ ಹಾನಿ ಉಂಟು ಮಾಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಾವು ಮಕ್ಕಳಿಗೆ ನಮ್ಮ ಸಂಸ್ಕಾರ, ಸಂಸ್ಕೃತಿಯ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ನಮ್ಮೆಲ್ಲರ ಆರಾಧ್ಯ ದೈವ ಶ್ರೀಕೃಷ್ಣ ಒಬ್ಬ ಮನೋವಿಜ್ಞಾನಿ. ಜೀವನಕ್ಕೆ ಅಗತ್ಯವಿರುವ ಎಲ್ಲ ಸಲಹೆಗಳನ್ನೂ ಭಗವದ್ಗೀತೆಯಲ್ಲಿ ಬೋಧಿಸಿದ್ದಾನೆ. ಕೃಷ್ಣನ ತತ್ವಗಳನ್ನು ಅರ್ಥಪೂರ್ಣವಾಗಿ ಅಳವಡಿಸಿಕೊಂಡಿರುವ ಏಕೈಕ ದೇಶ ನಮ್ಮದು. ಇವತ್ತು ಮಸೀದಿ, ಚರ್ಚ್‌ಗಳಲ್ಲಿ ಕುರಾನ್, ಬೈಬಲ್‌ ಕುರಿತು ಅರಿವು ಮೂಡಿಸುವ ಕೆಲಸಗಳಾಗುತ್ತಿವೆ. ಆದರೆ ನಮ್ಮ ದೇವಾಲಯಗಳಲ್ಲಿ ಅಂತಹ ಕೆಲಸ ನಡೆಯುತ್ತಿಲ್ಲ. ಮಠ–ಮಂದಿರಗಳು, ದೇವಾಲಯಗಳು, ಸನ್ಯಾಸಿಗಳು ನಾವೆಲ್ಲ ಹಿಂದೂಗಳು ಎಂಬ ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ’ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವತ್ತು ದೇಶದಲ್ಲಿ ಜನರು ಕೇಂದ್ರ ಸರ್ಕಾರ, ಮೋದಿ, ಅಮಿತ್‌ ಶಾ ಅವರ ಪರವಾಗಿ ಜನ ಮಾತನಾಡುತ್ತಿದ್ದಾರೆ. ಆದ್ದರಿಂದ ಎಲ್ಲಿ ನಮ್ಮ ಸ್ಥಾನ ಹೋಗಿ ಬಿಡುತ್ತದೆ ಎಂಬ ಉದ್ದೇಶದಿಂದ ಕೆಲವರು ಗೊಂದಲ ಸೃಷ್ಟಿಸಿ, ಮತ್ತೊಮ್ಮೆ ದೇಶ ವಿಭಜಿಸಬೇಕು ಎನ್ನುವ ಹುನ್ನಾರ ನಡೆಸಿದ್ದಾರೆ. ಅದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇಶ ವಿಭಜನೆ ಸಂದರ್ಭದಲ್ಲೇ ಅಂಬೇಡ್ಕರ್‌ ಅವರು, ಇದೊಂದು ಮತೀಯ ಆಧಾರದಲ್ಲಿ ನಡೆದ ವಿಭಜನೆಯಾದ್ದರಿಂದ, ಪಾಕಿಸ್ತಾನದಲ್ಲಿರುವ ಹಿಂದೂಗಳನ್ನೆಲ್ಲ ಇಲ್ಲಿಗೆ ಬರಲು ಹೇಳಿ, ಇಲ್ಲಿರುವ ಮುಸಲ್ಮಾನರನ್ನು ಅಲ್ಲಿಗೆ ಕಳುಹಿಸಿ ಎಂದು ಹೇಳಿದರು. ಹಾಗೇ ಆಗಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಜಗತ್ತು ಕೂಡ ಶಾಂತವಾಗಿ ಇರುತ್ತಿತ್ತು’ ಎಂದು ಹೇಳಿದರು.

‘ಇವತ್ತು ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್‌ರು ಮತ್ತು ಕಮ್ಯೂನಿಸ್ಟರು ಒಂದು ರೀತಿಯಲ್ಲಿ ದೇಶ ವಿರೋಧಿ ವಿಚಾರ ಮಾಡುತ್ತ, ತಮ್ಮದೇ ಸಾಮ್ರಾಜ್ಯಗಳ ನಿರ್ಮಾಣ ಮಾಡಬೇಕು ಎನ್ನುವ ಹುನ್ನಾರದಲ್ಲಿದ್ದಾರೆ. ಆದ್ದರಿಂದ ನಮ್ಮ ಧರ್ಮದ ಜಾಗೃತಿ ಕಾರ್ಯ ನಡೆಯಬೇಕಿದೆ’ ಎಂದರು.

‘ಇಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಬೇರೆ ದೃಷ್ಟಿಯಿಂದ ಯೋಚನೆ ಮಾಡುತ್ತಿದ್ದಾರೆ. ಅವರು ಏಸು, ಅಲ್ಲಾನನ್ನು ಆರಾಧಿಸಲು ನಮಗೆ ಅಭ್ಯಂತರವಿಲ್ಲ. ಅದನ್ನು ಬಿಟ್ಟು ಇನ್ನೊಬ್ಬರನ್ನು ಮತಾಂತರ ಮಾಡಿದರೆ ಸ್ವರ್ಗದಲ್ಲಿ 76 ಹೆಣ್ಣು ಮಕ್ಕಳು, ಕುಡಿಯಲು ಮದ್ಯ ಸಿಗುತ್ತದೆ ಎಂಬ ಆ ಸಮಾಜಗಳನ್ನು ಹಾಳು ಮಾಡುವ ಮುಖಂಡರ ಹುಚ್ಚು ಮಾತುಗಳಿಂದ ಸಿಕ್ಕವರನ್ನೆಲ್ಲ ಮುಸ್ಲಿಮರು, ಕ್ರಿಶ್ಚಿಯನ್‌ರನ್ನಾಗಿ ಮತಾಂತರಿಸುವ ಕೆಲಸ ನಡೆಯುತ್ತಿದೆ. ಇದನ್ನು ತಡೆಯುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು.

ಕಲ್ಯಾಣೋತ್ಸವದಲ್ಲಿ ಕೆಂಗೇರಿ ಓಂಕಾರ ಆಶ್ರಮದ ಮಧುಸೂದನಾನಂದಪುರಿ ಸ್ವಾಮೀಜಿ, ರಾಯಲ್ಪಾಡು ವಿದ್ವಾನ್ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ, ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಚಿಕ್ಕನರಸಿಂಹಯ್ಯ, ಸಮಿತಿಯ ರಮೇಶ್, ವಿಕ್ರಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.