ADVERTISEMENT

ಗೌರಿಬಿದನೂರು| ರಸ್ತೆ ಬದಿ ತ್ಯಾಜ್ಯ; ನಾಗರಿಕರಿಗೆ ಸಂಕಷ್ಟ

ಸ್ಥಳೀಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 5:11 IST
Last Updated 17 ಫೆಬ್ರುವರಿ 2023, 5:11 IST
ಅಲಕಾಪುರ ‌ಗ್ರಾ.ಪಂ ವ್ಯಾಪ್ತಿಯ ಪೋತೇನಹಳ್ಳಿ ಬಳಿ ರಸ್ತೆಯ ಎರಡೂ ಬದಿಯಲ್ಲಿ ಸಂಗ್ರಹವಾಗಿರುವ ಕಸದ ರಾಶಿಗಳು
ಅಲಕಾಪುರ ‌ಗ್ರಾ.ಪಂ ವ್ಯಾಪ್ತಿಯ ಪೋತೇನಹಳ್ಳಿ ಬಳಿ ರಸ್ತೆಯ ಎರಡೂ ಬದಿಯಲ್ಲಿ ಸಂಗ್ರಹವಾಗಿರುವ ಕಸದ ರಾಶಿಗಳು   

ಗೌರಿಬಿದನೂರು: ಗ್ರಾಮದಲ್ಲಿನ ಪ್ರತಿ ಮನೆಯಲ್ಲಿ ಶೇಖರಣೆಯಾಗುವ ಕಸ ಪ್ರತ್ಯೇಕವಾಗಿ ಸಂಗ್ರಹಿಸಿ ಅದನ್ನು ವ್ಯವಸ್ಥಿತವಾಗಿ ಘಟಕಗಳಿಗೆ ಸರಬರಾಜು ಮಾಡಲು ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ವ್ಯಯಿಸಿದೆ. ಆದರೆ ಸ್ಥಳೀಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ಹಳ್ಳ ಹಿಡಿದಿದ್ದು, ಗ್ರಾಮಗಳ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿಗಳು ನಿರ್ಮಾಣವಾಗಿದೆ.

ತಾಲ್ಲೂಕಿನ ಅಲಕಾಪುರ ಗ್ರಾ. ಪಂ ವ್ಯಾಪ್ತಿಯ ಪೋತೇನಹಳ್ಳಿ ಬಳಿ ರಾಜ್ಯ ರಸ್ತೆ ಹೆದ್ದಾರಿಯ ಎರಡೂ ಬದಿಯಲ್ಲಿ ನಿತ್ಯ ತ್ಯಾಜ್ಯದ ರಾಶಿಗಳದ್ದೇ ಕಾರುಬಾರು. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ, ಗ್ರಾ. ಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಯೋಜನೆಗಳು ಸಾಕಾರಗೊಳ್ಳದೆ ಕೇವಲ ದಾಖಲೆಗಳಿಗೆ ಸೀಮಿತವಾಗಿದೆ.

ಗ್ರಾ.ಪಂ ಕಾರ್ಯಾಲಯದ ವ್ಯಾಪ್ತಿಯಲ್ಲಿನ ಅಲಕಾಪುರ, ಬರ್ಜಾನುಕುಂಟೆ, ನಂದಿಗಾನಹಳ್ಳಿ, ರಾಯರೇಖಲಹಳ್ಳಿ, ಪೋತೇನಹಳ್ಳಿ, ಹನುಮೇನಹಳ್ಳಿ, ಹುಸೇನ್ ಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ತ್ಯಾಜ್ಯವು ಎಲ್ಲೆಂದರಲ್ಲಿ ಅವೈಜ್ಞಾನಿಕ ಬಿಸಾಡಲಾಗಿದೆ. ಆದಾಗ್ಯೂ, ಅಧಿಕಾರಿಗಳು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ADVERTISEMENT

ತೊಂಡೇಬಾವಿ, ಕಲ್ಲಿನಾಯಕನಹಳ್ಳಿ, ಅಲಕಾಪುರ, ಜಿ.ಬೊಮ್ಮಸಂದ್ರ ಸೇರಿದಂತೆ ಇತರ ಗ್ರಾ.ಪಂ ವ್ಯಾಪ್ತಿಯಲ್ಲಿನ ಗ್ರಾಮಗಳಿಂದ ಸಂಗ್ರಹವಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಸೂಕ್ತ ನಿರ್ವಹಣೆ ಮಾಡುವಂತೆ ತಾ.ಪಂ ಮತ್ತು ಜಿ.ಪಂ ಯಿಂದ ನಿರ್ದೇಶನ ನೀಡಲಾಗಿದೆ‌. ಆದರೆ ಗ್ರಾ.ಪಂ ಯವರು ಇದನ್ನು ಬಳಕೆ ಮಾಡಿಕೊಳ್ಳಲು ‌ಮೀನಾಮೇಷ ಎಣಿಸುತ್ತಿದ್ದಾರೆ ಎನ್ನುತ್ತಾರೆ ತೊಂಡೇಬಾವಿ ಗ್ರಾ.ಪಂ ಪಿಡಿಒ ಬಸವರಾಜ್ ಬಳೂಟಗಿ.

ರಸ್ತೆಯ ಎರಡೂ ಬದಿಯಲ್ಲಿ ಕಾಣುವ ತ್ಯಾಜ್ಯವು ಗ್ರಾಮದ ಸ್ವಚ್ಛತೆ ‌ಮತ್ತು ಆರೋಗ್ಯ ಸಂರಕ್ಷಣೆಗೆ ಸವಾಲಾಗಿದೆ. ಇದರಿಂದ ಮಕ್ಕಳು ಮತ್ತು‌ ವಯೋವೃದ್ಧರಿಗೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿವೆ. ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿವೆ.

ಬಳಕೆಯಾಗದ ಕಸ ಸಂಗ್ರಹ ವಾಹನ

ತಾ. ಪಂ ಮತ್ತು‌ ಜಿ. ಪಂ ವತಿಯಿಂದ ನೆರೆಯ ತೊಂಡೇಬಾವಿ ‌ಗ್ರಾ. ಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದ್ದು, ಈ ಭಾಗದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸರಬರಾಜು ‌ಮಾಡಿ ಸಾವಯವ ಗೊಬ್ಬರ ಮಾಡುವಂತೆ ಸರ್ಕಾರವು ಸೂಕ್ತ ನಿರ್ದೇಶನ ನೀಡಿದೆ.

ಅಲಕಾಪುರ ಗ್ರಾ.ಪಂ ನಲ್ಲೂ ಪ್ರತ್ಯೇಕ ವಾಹನ ಸೌಲಭ್ಯ ಕಸದ ಡಬ್ಬಗಳ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಸರ್ಕಾರದ ಅನುದಾನದಡಿಯಲ್ಲಿ ಮಾಡಲಾಗಿದೆ. ಆದರೆ ತ್ಯಾಜ್ಯ ಸಂಗ್ರಹಣೆ ವಾಹನ ಈವರೆಗೆ ಒಂದು ದಿನವೂ ತ್ಯಾಜ್ಯ ಸಂಗ್ರಹಣೆಗೆ ಬಳಕೆ ಮಾಡಿಲ್ಲ ಎಂದು ಪಿಡಿಒ ಅಧಿಕಾರಿ ನರಸಿಂಹಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.