ಚಿಂತಾಮಣಿ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಗತಿ ದಿಗೂರು ಗ್ರಾಮದ ಹೊರವಲಯದಲ್ಲಿನ ತೋಟದ ಒಂಟಿ ಮನೆಯೊಂದಕ್ಕೆ ಶನಿವಾರ ರಾತ್ರಿ ಒಳನುಗ್ಗಿರುವ ನಾಲ್ವರು ದರೋಡೆಕೋರರ ತಂಡ ನಗದು ಹಾಗೂ ಚಿನ್ನ ಬೆಳ್ಳಿ ಆಭರಣ ಸೇರಿ ಸುಮಾರು ₹5 ಲಕ್ಷ ದೋಚಿ ಪರಾರಿಯಾಗಿದ್ದಾರೆ.
ನಾರಾಯಣಸ್ವಾಮಿ ಅವರ ಮನೆಗೆ ಶನಿವಾರ ರಾತ್ರಿ ದರೋಡೆಕೋರರು ನುಗ್ಗಿದ್ದಾರೆ. ಮಾಲೀಕ ನಾರಾಯಣಸ್ವಾಮಿ, ಪತ್ನಿ ಹಾಗೂ ಮಗಳು ಮನೆಯಲ್ಲಿದ್ದರು. ಚಾಕು, ಲಾಂಗ್ ತೋರಿಸಿ, ಬೆದರಿಸಿ ನಾರಾಯಣಸ್ವಾಮಿ ಅವರನ್ನು ಕಟ್ಟಿಹಾಕಿದ್ದಾರೆ. ಮಗಳು ಗರ್ಭಿಣಿಯಾಗಿದ್ದು ಹೆರಿಗೆಗೆ ತವರು ಮನೆಗೆ ಬಂದಿದ್ದರು. ದರೋಡೆಕೋರರು ಆಕೆಯ ಮಾಂಗಲ್ಯ ಸರವನ್ನು ಸಹ ಬಿಡದೆ ಕಿತ್ತುಕೊಂಡು ಹೋಗಿದ್ದಾರೆ.
ಮನೆಯವರನ್ನು ಬೆದರಿಸಿ ಬೀರುವಿನ ಕೀ ಪಡೆದು ₹65 ಸಾವಿರ, 60 ಗ್ರಾಂ ಬಂಗಾರದ ಒಡವೆ ಮತ್ತು ಕೆಲವು ಬೆಳ್ಳಿಯ ಆಭರಣ ಕದ್ದಿದ್ದಾರೆ. ನನ್ನನ್ನು ಕಟ್ಟಿಹಾಕಿ ಪತ್ನಿ ಮತ್ತು ಮಗಳಿಗೆ ಭಯಪಡಿಸಿ ಮನೆಯಲ್ಲಿರುವ ನಗದು ಮತ್ತು ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಮಾಲೀಕ ನಾರಾಯಣಸ್ವಾಮಿ ಹೇಳಿದರು.
ಎಸ್ಪಿ ಡಿ.ಎಲ್.ನಾಗೇಶ್, ಡಿವೈಎಸ್ಪಿ ಮುರಳೀಧರ್ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಶ್ವಾನದಳ ಹಾಗೂ ಬೆರಳಚ್ಚು ತಂಡ ಅಗಮಿಸಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.