ADVERTISEMENT

‘ಖಾಸಗಿ ಶಾಲಾ ಶಿಕ್ಷಕರ ಬದುಕಿಗೆ ಭದ್ರತೆ’

ಗೌರಿಬಿದನೂರಿನಲ್ಲಿ ಆರ್ಥಿಕ ಸಹಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 16:30 IST
Last Updated 6 ನವೆಂಬರ್ 2020, 16:30 IST
ಜಿ.ಪಂ ಸದಸ್ಯ ಕೆ.ಕೆಂಪರಾಜು ತಾಲ್ಲೂಕಿನ ಖಾಸಗಿ ಶಾಲೆಗಳ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡಿದರು
ಜಿ.ಪಂ ಸದಸ್ಯ ಕೆ.ಕೆಂಪರಾಜು ತಾಲ್ಲೂಕಿನ ಖಾಸಗಿ ಶಾಲೆಗಳ ಶಿಕ್ಷಕರಿಗೆ ಆರ್ಥಿಕ ಸಹಾಯ ಮಾಡಿದರು   

ಗೌರಿಬಿದನೂರು: ‘ಉತ್ತಮ‌ ಶಿಕ್ಷಣವನ್ನು ಪಡೆದು ಖಾಸಗಿ ಶಾಲೆಗಳ ಸ್ವಾವಲಂಬಿ ಶಿಕ್ಷಕರ ಬದುಕಿಗೆ ಭದ್ರತೆ ಒದಗಿಸಲು ಸದಾ ಬದ್ಧವಾಗಿರುತ್ತೇವೆ’ ಎಂದು ಜಿ.ಪಂ ಸದಸ್ಯ ಕೆ.ಕೆಂಪರಾಜು ತಿಳಿಸಿದರು.

ನಗರದ ಹೊರವಲಯದಲ್ಲಿ ಗುರುವಾರ ಆಯೋಜಿಸಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ಸಹಕಾರ ನೀಡುವ ‘ನೆರವು’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಯುವಕರು ಸಂಕಷ್ಟದಲ್ಲಿಯೇ ಪದವಿಯನ್ನು ಪಡೆದು ಜತೆಗೆ ಶಿಕ್ಷಕ ತರಬೇತಿ ಮುಗಿಸಿಕೊಂಡು ಬದುಕು ರೂಪಿಸಿಕೊಳ್ಳಲು ಅರೆಕಾಲಿಕ ವೃತ್ತಿಯಾಗಿ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಚಾರವಾಗಿದೆ. ಇದರಿಂದ ನೂರಾರು ಮಕ್ಕಳಿಗೆ ಜ್ಞಾನದ ಆಸರೆಯಾಗಿ ಅವರ ಬದುಕಿಗೆ ನಿಜವಾದ ಗುರುಗಳಾಗಿದ್ದಾರೆ’ ಎಂದರು.

ADVERTISEMENT

‘ಕೋವಿಡ್ ಸಂಕಷ್ಟದಿಂದ ಶಾಲೆಗಳು ಆರಂಭವಾಗದೆ, ಆಡಳಿತ ಮಂಡಳಿಗಳು ನೆರವಿಗೆ ಬಾರದೆ ಅಲ್ಲಿ ಕಾರ್ಯನಿರ್ವಹಿಸುವ ಪ್ರತಿಭಾವಂತ ಶಿಕ್ಷಕರು ಬದುಕು ರೂಪಿಸಿಕೊಳ್ಳಲು ಪರಿತಪಿಸುವಂತಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಸಹಕಾರ ನೀಡುವ ಜನತೆಗೆ ಅವರಲ್ಲಿನ ಪ್ರತಿಭೆಗೆ ಅನುಗುಣವಾಗಿ ಸ್ಥಳೀಯವಾಗಿಯೇ ಕಾರ್ಯನಿರ್ವಹಿಸುವಂತಹ ವಿನೂತನ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹೇಳಿದರು.

‘ರಾಜ್ಯದ ಬಹುತೇಕ ಗ್ರಾಮೀಣ ಭಾಗದಲ್ಲಿನ ಬಡ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ದೊರೆಯುತ್ತಿದೆ. ಅಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕರೂ ಸರ್ಕಾರದ ನೆರವಿನಲ್ಲಿ‌ ನೆಮ್ಮದಿಯ ಬದುಕು‌ ಕಟ್ಟಿಕೊಂಡಿದ್ದಾರೆ. ಆದರೆ ಬಹುತೇಕ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳ ಬದುಕು ಮಾತ್ರ ಖಾಸಗಿ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷಕರ ಅಡಿಯಲ್ಲಿ ನಡೆಯುತ್ತಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಯಾಗಲಿ ಅಥವಾ ಸರ್ಕಾರವಾಗಲೀ ಇದುವರೆವಿಗೂ ಅಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕ ಬದುಕಿಗೆ ಭದ್ರತೆ ಒದಗಿಸುವ ಬಗ್ಗೆ ಚಿಂತಿಸದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ’ ಎಂದು ಕೆ.ಕೆಂಪರಾಜು ಹೇಳಿದರು.

ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೌಸ್ ಪೀರ್ ಮಾತನಾಡಿ, ‘ಕೋವಿಡ್ ಪರಿಣಾಮ ಇಡೀ ರಾಜ್ಯದಲ್ಲಿನ ಖಾಸಗಿ ಶಾಲೆಗಳು ಆರಂಭವಾಗದ ಕಾರಣ ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಬದುಕು ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಇವರ ನೆರವಿಗೆ ಬಾರದೆ ಕೈಚೆಲ್ಲಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಅವರ ಬಾಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೆ.ಕೆಂಪರಾಜು ಆರ್ಥಿಕ ಸಹಕಾರವನ್ನು ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಅವರ ಕೈ ಬಲಪಡಿಸುವ ಕಾರ್ಯವನ್ನು ನಾವೆಲ್ಲ ಒಮ್ಮತದಿಂದ ಮಾಡಬೇಕಾಗಿದೆ’ ಎಂದು ಹೇಳಿದರು.

ವೇದಿಕೆಯಲ್ಲಿ ಖಾಸಗಿ ಶಾಲೆಗಳ ಹಿರಿಯ ಶಿಕ್ಷಕರನ್ನು ಕೆ.ಕೆಂಪರಾಜು ಸನ್ಮಾನಿಸಿದರು. ವೇದಲವೇಣಿ ರಾಮು, ವೈ.ಕೆ.ಪ್ರಕಾಶ್, ಲಕ್ಷ್ಮೀಕಾಂತ್, ಶ್ರೀನಾಥ್, ಖಲೀಲ್, ಗಂಗಾಧರಪ್ಪ, ಸುನೀಲ್ ಪ್ರಕಾಶ್, ಮಲ್ಲಿಕಾರ್ಜುನ, ನಂಜುಂಡಪ್ಪ, ಸತೀಶ್, ಶಬ್ಬೀರ್, ಸತ್ಯನಾರಾಯಣ, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.