
ಶಿಡ್ಲಘಟ್ಟ: ‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಮುಸ್ಲಿಂ ಸಮುದಾಯದ ನಾಯಕ ನಜೀರ್ ಅಹ್ಮದ್ ಅವರನ್ನು ಟೆರರಿಸ್ಟ್ ಎಂದು ಕರೆದಿರುವ ಕೋಲಾರದ ಮಾಜಿ ಸಂಸದ ಎಸ್.ಮುನಿಸ್ವಾಮಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ದರ್ವೇಶ್ ವೆಲಫೇರ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ನಿಜಾಮುದ್ದೀನ್ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಜೀರ್ ಅಹಮ್ಮದ್ ಅವರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ನೀಚ ಬುದ್ಧಿ ಪ್ರದರ್ಶಿಸುತ್ತಿದ್ದೀರಿ. ಕೋಲಾರ ಸಂಸದರಾಗಿ ಐದು ವರ್ಷ ಪೂರೈಸಿದ ನೀವು ಮಾಡಿದ ಕೆಲಸಗಳು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಜನರಿಗೂ ಗೊತ್ತಿದೆ. ಅಧಿಕಾರ ಇದ್ದಷ್ಟು ದಿನ ಕೇವಲ ಮತೀಯ ಗಲಭೆಗಳಿಗೆ ಉತ್ತೇಜನ ಕೊಡುವುದು ಸೇರಿದಂತೆ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಾ ಕಾಲ ಕಳೆದ ನೀವು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಿ. ನಿಮ್ಮ ಐದು ವರ್ಷಗಳ ಆಡಳಿತಾವಧಿಯಲ್ಲಿ ಶಿಡ್ಲಘಟ್ಟ ಕ್ಷೇತ್ರಕ್ಕೆ ಕನಿಷ್ಠ ಬಸ್ ಶೆಲ್ಟರ್ ಸಹ ಹಾಕಿಸಲಿಲ್ಲ. ನೀವು ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸಹಿಸಲ್ಲ. ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಿ’ ಎಂದರು.
ಪ್ಯಾರೇಜಾನ್, ಮುಜಾಹಿದ್, ಅಕ್ಬರ್ಖಾನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.