ಶಿಡ್ಲಘಟ್ಟ: ಪೌರ ಕಾರ್ಮಿಕರು ನಗರದ ಆಸ್ತಿ ಇದ್ದಂತೆ. ಮಳೆ, ಚಳಿ, ಗಾಳಿ ಲೆಕ್ಕಿಸದೆ ನಗರದ ಸ್ವಚ್ಛತೆ ಕಡೆ ಗಮನ ಹರಿಸುತ್ತಾರೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ನಗರದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ನಗರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ನಗರದಲ್ಲಿ 12,800 ಮನೆಗಳಿದ್ದು, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಕೊಡುವ ನಿಟ್ಟಿನಲ್ಲಿ ಅಮೃತ್ 2 ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ₹92 ಕೋಟಿ ಅನುದಾನ ಕೊಟ್ಟಿದ್ದಾರೆ. ಮುಂದಿನ 40 ವರ್ಷಗಳ ದೂರದೃಷ್ಟಿಯಿಂದ ಯೋಜನೆ ರೂಪಿಸಿ ಯುಜಿಡಿಗಾಗಿ ₹38 ಕೋಟಿ ಅನುದಾನ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.
ನಗರಸಭೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಪೌರಕಾರ್ಮಿಕರಿದ್ದು ಮತ್ತು ನಗರಸಭೆ ಅಧಿಕಾರಿಗಳು ಒಗ್ಗಟ್ಟಾಗಿ ಶ್ರಮಿಸಿ ಅಭಿವೃದ್ಧಿಪಡಿಸಬೇಕು. ನಗರದಲ್ಲಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಬೀದಿದೀಪದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ನಗರ ಸ್ವಚ್ಛವಾಗಿರಲು ಪೌರ ಕಾರ್ಮಿಕರ ಶ್ರಮ ಅಪಾರ. ನಗರ ಸ್ವಚ್ಛತೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಗರಸಭೆ ಅಧಿಕಾರಿಗಳ ಕಾರ್ಯ ಶ್ಲಾಘನೀಯ. ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಿದ್ದಂತೆ. ನಿತ್ಯ ನಗರಸಭೆ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ. ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಮಹಿಳಾ ಪೌರಕಾರ್ಮಿಕರಿಗೆ ಕುಕ್ಕರ್, ಸೀರೆ ಹಾಗೂ ಪುರುಷ ಪೌರ ಕಾರ್ಮಿಕರಿಗೆ ಶರ್ಟ್, ಪ್ಯಾಂಟ್ ಬಟ್ಟೆ, ಕುಕ್ಕರ್ ವಿತರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಭಾಸ್ಕರ್, ಪೌರಾಯುಕ್ತೆ ಜಿ.ಅಮೃತ, ನಗರಸಭೆ ಅಧ್ಯಕ್ಷ ಎಂ.ವಿ ವೆಂಕಟಸ್ವಾಮಿ, ಎಇಇ ಮಾಲಿನಿ, ಎಂ.ಶ್ರೀನಿವಾಸ್, ಮೇಲೂರು ಮಂಜುನಾಥ್, ಸುಬ್ಬಾರೆಡ್ಡಿ, ತಾದೂರು ರಘು, ನಂದ ಕಿಶನ್, ಹನುಮಂತಪುರ ವಿಜಯ್ ಕುಮಾರ್, ನಗರಸಭೆಯ ಎಲ್ಲಾ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.