
ಶಿಡ್ಲಘಟ್ಟ: ಶಾಲಾ ಶಿಕ್ಷಣ ಇಲಾಖೆ, ಸರ್ ಎಂ. ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಗಳ ಆಶ್ರಯದಲ್ಲಿ ನಗರದ ಗರುಡಾದ್ರಿ ಶಾಲೆಯಲ್ಲಿ ಪ್ರೌಢಶಾಲಾ ಹಂತದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳಿಗೆ ಶನಿವಾರ ಚಾಲನೆ ನೀಡಲಾಯಿತು.
ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ‘ಎಳೆಯ ವಯಸ್ಸಿನಿಂದಲೇ ಎಲ್ಲವನ್ನೂ ಪ್ರಶ್ನಿಸಿ ತಿಳಿದುಕೊಂಡು ಮೂಢನಂಬಿಕೆಗಳನ್ನು ಹತ್ತಿಕ್ಕುವ ಗುಣ ಬೆಳೆಸಿಕೊಳ್ಳಬೇಕು. ಕಲಿಯುವ ಅವಧಿಯಲ್ಲಿ ಪ್ರಯೋಗಶೀಲತೆ, ಚಿಂತನಾತ್ಮಕ ಮತ್ತು ರಚನಾತ್ಮಕತೆ ಮೂಲಕ ಹೊಸತನ್ನು ಅನ್ವೇಷಿಸುವ ಮನೋಧೋರಣೆ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿ ದಿಸೆಯಿಂದಲೇ ವೈಜ್ಞಾನಿಕ ಮನೋಭಾವನೆ ವೃದ್ಧಿಯಾದರೆ ಯುವ ವಿಜ್ಞಾನಿಗಳು ಹೊರಹೊಮ್ಮಬಹುದು. ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನವನ್ನು ಒಳ್ಳೆಯದಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್ ಮಾತನಾಡಿ, ಮೂಲವಿಜ್ಞಾನದ ಅರಿವು ಹೆಚ್ಚಾಗಬೇಕು. ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯು ಹೆಚ್ಚಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಗುಣ ಬೆಳೆಸಿಕೊಳ್ಳಬೆಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿದರು.
ಸಾಮೂಹಿಕ ವಿಭಾಗದಲ್ಲಿ 14, ವೈಯಕ್ತಿಕ ವಿಭಾಗದಲ್ಲಿ 11 ತಂಡಗಳು ವಿವಿಧ ಮಾದರಿಗಳನ್ನು ಪ್ರದರ್ಶಿಸಿದವು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗರುಡಾದ್ರಿ ಶಾಲೆಯ ಪ್ರಾಂಶುಪಾಲೆ ರೂಪಾ ಕೆ. ರಮೇಶ್, ಶಿಕ್ಷಣ ಸಂಯೋಜಕ ಅಂಕಿರೆಡ್ಡಿ, ತೀರ್ಪುಗಾರ ಜಿ.ಲಕ್ಷ್ಮಿಪ್ರಸಾದ್, ಬೃಂದಾ, ವಿಶ್ವನಾಥ್, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.