
ಶಿಡ್ಲಘಟ್ಟ: ಶಾಲಾ ಮಕ್ಕಳಿಗೆ ರೋಬೋಟಿಕ್ಸ್ ಕಲಿಕೆಯು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿಸುತ್ತದೆ ಮತ್ತು ತರ್ಕಬದ್ಧ ಚಿಂತನೆಯನ್ನು ಬೆಳೆಸುತ್ತದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ ಹೇಳಿದರು.
ಶಾರದಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರೋಬೋಟಿಕ್ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ರೋಬೋಟಿಕ್ಸ್ ಅನ್ನು ಪ್ರಾಥಮಿಕ ತರಗತಿಯಿಂದ ಶಾರದಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಒಂದು ವಿಷಯವಾಗಿ ಕಲಿಸುತ್ತಿರುವುದು ಅನುಕರಣೀಯ. ನಗರದಲ್ಲಿನ ಶಿಕ್ಷಣದ ರೀತಿಯಲ್ಲಿ ಗ್ರಾಮಾಂತರ ಭಾಗದಲ್ಲಿಯೂ ತಾಂತ್ರಿಕ ಕೌಶಲ ವೃದ್ಧಿಸುವ ಶಿಕ್ಷಣದ ಮೂಲಕ ಮಕ್ಕಳಲ್ಲಿ ನಾವೀನ್ಯತೆ ಬೆಳೆಸಲಾಗುತ್ತಿದೆ. ಇದು ಡಿಜಿಟಲ್ ಮಕ್ಕಳಲ್ಲಿ ಕೌಶಲ ಬಲಪಡಿಸಿ, ಅವರನ್ನು ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುತ್ತದೆ ಎಂದು ಹೇಳಿದರು.
ಶಾರದಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿ, ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಯುವಿಪೆಪ್ ಸಂಸ್ಥೆ ಮೂಲಕ ರೋಬೋಟಿಕ್ಸ್ ಕಲಿಸಲಾಗುತ್ತಿದೆ. ಕಲಿತಿರುವ ಜ್ಞಾನವನ್ನು ಮಕ್ಕಳು ಸುಮಾರು 35ಕ್ಕೂ ಹೆಚ್ಚು ಮಾದರಿಗಳ ಮೂಲಕ ಪ್ರದರ್ಶಿಸಿದ್ದಾರೆ ಎಂದರು.
ಎ.ಆರ್.ಮುನಿರತ್ನಂ, ಮೂರ್ತಿ ಸಾಮ್ರಾಟ್, ರಾಜೇಶ್, ಸಿದ್ಧರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.