ADVERTISEMENT

ಆವುಲಬೆಟ್ಟದಲ್ಲಿ ಘನ ತ್ಯಾಜ್ಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 5:26 IST
Last Updated 12 ಜುಲೈ 2021, 5:26 IST
ಆವುಲಬೆಟ್ಟದಲ್ಲಿ ಸಂಗ್ರಹಿಸಿದ ತ್ಯಾಜ್ಯದೊಂದಿಗೆ ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರು
ಆವುಲಬೆಟ್ಟದಲ್ಲಿ ಸಂಗ್ರಹಿಸಿದ ತ್ಯಾಜ್ಯದೊಂದಿಗೆ ಹಸಿರು ಸ್ವಯಂ ಸೇವಾ ಸಂಸ್ಥೆ ಸದಸ್ಯರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪ್ರವಾಸಿ ತಾಣ ಆವುಲಬೆಟ್ಟದಲ್ಲಿ ನಗರದ ಹಸಿರು ಸ್ವಯಂ ಸೇವಾ ಸಂಸ್ಥೆಯ ಸದಸ್ಯರು ಭಾನುವಾರ ತ್ಯಾಜ್ಯ ಸಂಗ್ರಹಿಸಿದರು.

ಬೆಳಿಗ್ಗೆ 8ರ ವೇಳೆಗೆ ಬೆಟ್ಟ ಏರಿದ ತಂಡದ 28 ಸದಸ್ಯರು ದೇಗುಲದ ಸುತ್ತಮುತ್ತಲಿದ್ದ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನು ಸಂಗ್ರಹಿಸಿದರು. ಮಧ್ಯಾಹ್ನ 1 ಗಂಟೆಯವರೆಗೂ ಸ್ವಚ್ಛತಾ ಕಾರ್ಯ ನಡೆಸಿದರು. ಒಟ್ಟು 16 ಚೀಲಗಳಲ್ಲಿ ತ್ಯಾಜ್ಯ ಸಂಗ್ರಹಿಸಿದರು. ಇದನ್ನು ವಿಲೇವಾರಿ ಮಾಡುವಂತೆ ಅರಣ್ಯ ಇಲಾಖೆಯ ಸುಪರ್ದಿಗೆ ನೀಡಿದರು. ಬೆಟ್ಟದಿಂದ ಇಳಿಯುವಾಗಲೂ ತ್ಯಾಜ್ಯ ಸಂಗ್ರಹಿಸಿದರು.

ತಂಡದ ಮಾರ್ಗದರ್ಶಕ ಹಾಗೂ ಶಿಕ್ಷಕ ಮಹಾಂತೇಶ್ ಮಾತನಾಡಿ, ಪರಿಸರ ರಕ್ಷಿಸಬೇಕು ಎನ್ನುವುದೇ ನಮ್ಮ ಉದ್ದೇಶ. ಆಮ್ಲಜನಕದ ಕೊರತೆ ಈಗ ದೇಶದ ಎಲ್ಲೆಡೆ ಎದುರಾಗಿದೆ. ಪರಿಸರ ನಾಶದಿಂದ ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಪರಿಸರ ರಕ್ಷಿಸಿದರೆ ಅದು ನಮ್ಮ ಮಕ್ಕಳ ಭವಿಷ್ಯವನ್ನೂ ಉತ್ತಮವಾಗಿ ಇಡುತ್ತದೆ ಎಂದರು.

ADVERTISEMENT

ಕೈಗಾರಿಕೆಗಳು ಹೆಚ್ಚುತ್ತಿವೆ. ಪ್ಲಾಸ್ಟಿಕ್ ಬಳಕೆ ಸಹ ಅವ್ಯಾಹತವಾಗಿದೆ. ಇದೆಲ್ಲವನ್ನೂ ನಿಲ್ಲಿಸಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ನಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯಿಂದ ಈ ಹಿಂದಿನಿಂದಲೂ ಪರಿಸರ ಸಂರಕ್ಷಣೆ ಕಾರ್ಯಗಳು ನಡೆ ಯುತ್ತಿವೆ. ಈಗ ಸಂಗ್ರಹಿಸಿರುವ ತ್ಯಾಜ್ಯ ವನ್ನು ಅರಣ್ಯ ಇಲಾಖೆಗೆ ನೀಡಿದ್ದು ವಿಲೇವಾರಿ ಮಾಡುತ್ತಾರೆ ಎಂದರು.

ಮಹೇಶ್, ವಿಶು, ಪ್ರಮೋದ್, ಶ್ರೀಧರ್, ಪ್ರವೀಣ್, ರಾಜೇಶ್, ಸಂತೋಷ್, ಹರ್ಷ, ಸುಹಾಸ್, ಹೇಮಂತ್, ರಾಘವೇಂದ್ರ, ಮಹಾಂತೇಶ, ಪ್ರಣವ್, ಶಮಂತ್, ಪ್ರದೀಪ್, ರಂಜಿತ್, ಮಧು, ಜಬಿವುಲ್ಲಾ, ಸಲೀಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.